ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
ಕಣ್ಣೂರು: ತಾವು ಪ್ರತಿನಿಧಿಸುವ ಧರ್ಮದಾಮ್ ವಿಧಾನಸಭಾ ಕ್ಷೇತ್ರವು ಕಡುಬಡತನದಿಂದ ಮುಕ್ತಿ ಪಡೆದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಘೋಷಿಸಿದ್ದಾರೆ.
ಈ ಮೂಲಕ ಕೇರಳ ರಾಜ್ಯದಲ್ಲಿ ಧರ್ಮದಾಮ್ ಕಡು ಬಡತನದಿಂದ ಮುಕ್ತಿ ಪಡೆದ ಮೊದಲ ಕ್ಷೇತ್ರ ಎಂದು ಸಿಎಂ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
‘ನಮ್ಮ ಜನಸಂಖ್ಯೆಯ 1 ಪ್ರತಿಶತಕ್ಕೂ ಕಡಿಮೆ ಜನರು ಕಡು ಬಡತನದಲ್ಲಿದ್ದಾರೆ. ಆದ್ದರಿಂದ ನ.1ರ ಹೊತ್ತಿಗೆ ಸಂಪೂರ್ಣ ರಾಜ್ಯ ಕಡುಬಡತದಿಂದ ಮುಕ್ತವಾಗಿದೆ ಎಂದು ಘೋಷಿಸಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಇದು ನಮ್ಮ ಸಮಗ್ರ ಅಭಿವೃದ್ಧಿಯ ಪ್ರಯಾಣದಲ್ಲಿ ಒಂದು ಮೈಲಿಗಲ್ಲು’ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಕೇರಳ ಮಾಡಲ್ ಎಂದು ಹ್ಯಾಷ್ಟ್ಯಾಗ್ ಹಾಕಿಕೊಂಡಿದ್ದಾರೆ.
ಕೇರಳವು ಈಗಾಗಲೇ ಭಾರತದಲ್ಲಿ ಅತ್ಯಂತ ಕಡಿಮೆ ಬಡತನದ ಪ್ರಮಾಣವನ್ನು ಹೊಂದಿದೆ. ಸರ್ಕಾರವು ಈಗ ಕಡು ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೆಲಸ ಮಾಡುತ್ತಿದೆ ಎಂದು ವಿಜಯನ್ ಈ ಹಿಂದೆ ಹೇಳಿದ್ದರು.
ಪಿಣರಾಯಿ ವಿಜಯನ್ ನೇತೃತ್ವದ ಎಡಪಂಥೀಯ ಸರ್ಕಾರದ ನಾಲ್ಕನೇ ವರ್ಷಾಚರಣೆಯ ಭಾಗವಾಗಿ, 2025ರ ನ 1ರೊಳಗೆ ಈ ಗುರಿಯನ್ನು ಸಾಧಿಸುವ ಗುರಿಯನ್ನು ರಾಜ್ಯ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.