
ಬೆಂಗಳೂರು: ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶ–1 ಮತ್ತು 2, ಆದಿನಾರಾಯಣ ಹೊಸಹಳ್ಳಿ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿನ ಸ್ವತ್ತುಗಳ ಆಸ್ತಿ ತೆರಿಗೆ ಸಂಗ್ರಹ ಹೊಣೆಗಾರಿಕೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ನೀಡಲಾಗಿದೆ.
ಮಂಡಳಿಯು ಈ ಸಂಬಂಧ ದೇವನಹಳ್ಳಿ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ, ವಿಶ್ವನಾಥಪುರ ಮತ್ತು ಕೊಯಿರಾ ಗ್ರಾಮ ಪಂಚಾಯತಿಗಳ ಪಂಚಾಯತಿ ಆಡಳಿತಾಧಿಕಾರಿಗಳಿಗೆ ಸೋಮವಾರ ಪತ್ರ ಬರೆದಿದೆ.
‘ಈ ಮೂರು ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯ 3,117 ಎಕರೆ ವಿಸ್ತೀರ್ಣದ ಜಾಗವನ್ನು ‘ದೇವನಹಳ್ಳಿ ವಿಶೇಷ ಹೂಡಿಕೆ ವಲಯ’ ಎಂದು ಘೋಷಿಸಲಾಗಿದೆ. ಈ ವಲಯದಲ್ಲಿರುವ ಉದ್ದಿಮೆದಾರರು ತೆರಿಗೆಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಪಾವತಿ ಮಾಡಬೇಕಾಗಿರುತ್ತದೆ. ಅದರಂತೆ 2025–26ನೇ ಸಾಲಿನ ಆಸ್ತಿ ತೆರಿಗೆಯನ್ನು ಮಂಡಳಿಯೇ ಪಾವತಿ ಮಾಡಿಸಿಕೊಳ್ಳಲಿದೆ’ ಎಂದು ವಿವರಿಸಿದೆ.
‘ಪಂಚಾಯತಿಗಳ ಸದರಿ ತೆರಿಗೆ ಬಾಬ್ತನ್ನು, ಸರ್ಕಾರದ ಆದೇಶದಂತೆ ತಮಗೆ ಪಾವತಿಸುತ್ತೇವೆ’ ಎಂದೂ ತಿಳಿಸಿದೆ.
ದೇವನಹಳ್ಳಿ ಸಾಮಾನ್ಯ ಕೈಗಾರಿಕಾ ಪ್ರದೇಶ–1ರಲ್ಲಿ ಇರುವ ಫಾಕ್ಸ್ಕಾನ್ನ ಐಫೋನ್ ತಯಾರಿಕಾ ಘಟಕಕ್ಕೂ ಮಂಡಳಿ ಪತ್ರ ಬರೆದಿದೆ. ‘2025–26ನೇ ಸಾಲಿನ ಆಸ್ತಿ ತೆರಿಗೆಯನ್ನು ಮಂಡಳಿಗೇ ಪಾವತಿಸಿ. 2024–25ನೇ ಸಾಲಿನ ಆಸ್ತಿ ತೆರಿಗೆ ಹಿಂಬಾಕಿಗಳು ಇದ್ದರೆ, ಅದನ್ನು ಸಂಬಂಧಿತ ಗ್ರಾಮ ಪಂಚಾಯತಿಗೆ ಪಾವತಿಸಿ’ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.