ಬೆಂಗಳೂರು:ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆಸಲಾಗುತ್ತಿರುವಅಸ್ಥಿಮಜ್ಜೆ ಕಸಿಗೆ ಬೇಡಿಕೆ ಹೆಚ್ಚಾಗಿದೆ. ಈ ಕಸಿಗೆ ಸರ್ಕಾರವು ಅನುದಾನ ಬಿಡುಗಡೆ ಮಾಡದಿರುವುದರಿಂದ ಸಂಸ್ಥೆಯು ದಾನಿಗಳ ಮೊರೆ ಹೋಗಿದೆ.
ಸಂಸ್ಥೆಯ ಈ ಘಟಕಕ್ಕೆ ಕಳೆದ ಫೆಬ್ರುವರಿಯಲ್ಲಿ ಚಾಲನೆ ನೀಡಲಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ₹ 50 ಲಕ್ಷದವರೆಗೂ ವೆಚ್ಚವಾಗುವ ಅಸ್ಥಿಮಜ್ಜೆ (ಬೋನ್ ಮ್ಯಾರೊ) ಕಸಿ ಶಸ್ತ್ರಚಿಕಿತ್ಸೆಯನ್ನು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬದವರಿಗೆ ಈ ಘಟಕದ ಮೂಲಕ ಉಚಿತವಾಗಿ ಒದಗಿಸಲಾಗುತ್ತಿದೆ. ಸದ್ಯ ಸಂಸ್ಥೆಯೇ ಕಸಿಯ ವೆಚ್ಚವನ್ನು ಭರಿಸುತ್ತಿದೆ.ಈ ಕಸಿಗೆ ಈಗಾಗಲೇ 25 ಮಂದಿ ಹೆಸರು ನೋಂದಾಯಿಸಿದ್ದಾರೆ.
‘ರಾಜ್ಯ ಸರ್ಕಾರವು 2018 ರಲ್ಲಿ ಬಿಪಿಎಲ್ ಕುಟುಂಬಗಳಿಗಾಗಿ ರಾಜ್ಯ ಅಂಗಾಗ ಕಸಿ ಯೋಜನೆ ಆರಂಭಿಸಿದೆ. ಅಸ್ಥಿಮಜ್ಜೆ ಕಸಿಗೆ ‘ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ’ ಯೋಜನೆಯಡಿ ಹಾಗೂ ರಾಷ್ಟ್ರೀಯ ಆರೋಗ್ಯ ನಿಧಿಯಿಂದ ಅನುದಾನ ಒದಗಿಸುವಂತೆಸುವರ್ಣ ಆರೋಗ್ಯ ಟ್ರಸ್ಟ್ಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೆ ಅನುಮತಿ ದೊರೆಯುವ ನಿರೀಕ್ಷೆಯಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದ್ದಾರೆ.
ಆರ್ಥಿಕ ನೆರವಿಗೆ ಮನವಿ:‘ಬಡ ವರ್ಗದ ಕ್ಯಾನ್ಸರ್ ರೋಗಿಗಳಿಗೆ ದುಬಾರಿ ವೆಚ್ಚದ ಈ ಕಸಿಯ ವೆಚ್ಚ ಪಾವತಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ದಾನಿಗಳು ಆರ್ಥಿಕ ನೆರವು ನೀಡಲು ಮುಂದೆ ಬರಬೇಕು.ಈಗಾಗಲೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯೆ ಡಾ.ಎನ್. ಲಲಿತಾ ₹ 10 ಲಕ್ಷ ದೇಣಿಗೆ ನೀಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
‘ಅಸ್ಥಿಮಜ್ಜೆ ಕಸಿಯಲ್ಲಿ ರೋಗಿಯ ದೇಹದಲ್ಲಿ ಸಕ್ರಿಯವಾಗಿರುವ ಕ್ಯಾನ್ಸರ್ ಕಣಗಳನ್ನು ನಾಶಗೊಳಿಸಿ, ಅವರದೇ ದೇಹದ ಆರೋಗ್ಯ ಅಂಗದ ಒಂದಿಷ್ಟು ಮಜ್ಜೆಯನ್ನು ತೆಗೆಯಲಾಗುತ್ತದೆ. ಕ್ಯಾನ್ಸರ್ ಕಣಗಳು ನಾಶವಾದ ಜಾಗದಲ್ಲಿ ಕಸಿ ಮಾಡಲಾಗುತ್ತದೆ.ವಯಸ್ಕರ ಜತೆಗೆ ಮಕ್ಕಳಲ್ಲಿಯೂ ಕ್ಯಾನ್ಸರ್ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಈ ರೋಗ ಹಾಗೂ ತಪಾಸಣೆ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕು. ಕ್ಯಾನ್ಸರ್ ಕೋಶಗಳನ್ನು ಎಷ್ಟು ಬೇಗ ಪತ್ತೆ ಮಾಡುತ್ತೇವೆಯೋ ಅಷ್ಟು ಬೇಗ ಗುಣಪಡಿಸಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.
ಆರ್ಥಿಕ ನೆರವಿಗೆಬ್ಯಾಂಕ್ ವಿವರ
ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್ (ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಶಾಖೆ)
ಖಾತೆ ದಾರರ ಹೆಸರು: ಬಿಎಂಟಿ ಕಾರ್ಪಸ್ ಫಂಡ್
ಬ್ಯಾಂಕ್ ಖಾತೆ ಸಂಖ್ಯೆ: 8409101103548
ಐಎಫ್ಎಸ್ಸಿ ಸಂಖ್ಯೆ:CNRB 0008409
ಎಂಐಸಿಆರ್ ಸಂಖ್ಯೆ: 560015171
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.