ಹುಬ್ಬಳ್ಳಿ: ದೇಶದ್ರೋಹ ಕಾಯ್ದೆಯಡಿ ಬಂಧಿತರಾಗಿದ್ದ ಇಲ್ಲಿನ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪೊಲೀಸರು ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಭಾನುವಾರ ಬಿಡುಗಡೆ ಮಾಡಿದ್ದಾರೆ.
ಕಾಶ್ಮಿರದ ಬಾರಮುಲ್ಲಾದ ಅಮೀರ್ ವಾನಿ, ತಾಲೀಬ್ ಮಜೀದ್ ಮತ್ತು ಬಾಸಿತ್ ಸೋಫಿ ವಿರುದ್ಧ ಜಾಮೀನು ರಹಿತ ಐಪಿಸಿ 153ಎ (ಬಿ), 153ಬಿ (ಸಿ) ಮತ್ತು 505 (2) ಪ್ರಕರಣ ದಾಖಲಿಸಿ, ಕೋಮು ಸೌಹಾರ್ದ ಕದಡುವ ಹಾಗೂ ದೇಶದ್ರೋಹದ ಆರೋಪದಡಿ ಬಂಧಿಸಲಾಗಿತ್ತು. ಅಲ್ಲದೇ, ಎಫ್ಐಆರ್ನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ವಿಡಿಯೊದಲ್ಲಿ ಸನ್ನೆ ಮೂಲಕ ಹೇಳಿರುವುದು ನಮೂದಾಗಿದೆ. ಹೀಗಿದ್ದಾಗಲೂ ಸಾಕ್ಷ್ಯಾಧಾರದ ಕೊರತೆ ಎಂದು ಸಿಆರ್ಪಿಸಿ 169 ಕಾಯ್ದೆಯಡಿ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್ ‘ಪಾಕ್ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನು ಶನಿವಾರ ದೇಶದ್ರೋಹ ಕಾಯ್ದೆಯಡಿ ಬಂಧಿಸಲಾಗಿತ್ತು. ಆದರೆ, ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಲು ಸಾಕ್ಷ್ಯಾಧಾರಗಳು ಬೇಕು. ನಮ್ಮಲ್ಲಿ ಇರುವುದು ವಿಡಿಯೊ ಮಾತ್ರ. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕಾಲಾವಕಾಶ ಬೇಕಾಗಿದ್ದರಿಂದ ಅವರನ್ನು ಬಿಡುಗಡೆ ಮಾಡಿದ್ದೇವೆ’ ಎಂದಿದ್ದಾರೆ.
‘ಮೂವರು ವಿದ್ಯಾರ್ಥಿಗಳು ಪೊಲೀಸ್ ಸುಪರ್ದಿಯಲ್ಲಿಯೇ ಇದ್ದಾರೆ. ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ‘ ಎಂದೂ ಕೆಲವು ಪೊಲೀಸ್ ಮೂಲಗಳು ತಿಳಿಸಿವೆ.
*
ಆರೋಪಿಗಳ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿ, ಸಾಕ್ಷ್ಯಗಳ ಕೊರತೆ ಎಂದು ಬಿಡುಗಡೆ ಮಾಡಿರುವುದು ಸಂದೇಹಕ್ಕೆ ಕಾರಣವಾಗಿದೆ.
-ಅರುಣಕುಮಾರ,ಎಬಿವಿಪಿ ನಗರ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.