ಮಡಿಕೇರಿ: ಕೊಡಗಿನಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಗುರುವಾರ ಸಾಧಾರಣ ಮಳೆ ಸುರಿದಿದೆ.
ಮೂರು ದಿನಗಳ ಹಿಂದೆ ಸುರಿದಿದ್ದ ಭಾರಿ ಮಳೆಗೆ ಮಣ್ಣು ಸಡಿಲಗೊಂಡು 2ನೇ ಮೊಣ್ಣಂಗೇರಿ ಸಮೀಪದ ಕರ್ತೋಜಿ ಎಂಬಲ್ಲಿ ಬೆಟ್ಟದಿಂದ ಬಂಡೆಗಳು ಉರುಳಿವೆ.
ಈ ಘಟನೆಯು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ದೊಡ್ಡ ಗಾತ್ರದ ಬಂಡೆಗಳು ಕೊಲ್ಲಿ ಪ್ರದೇಶಕ್ಕೆ ಉರುಳಿ ಬಂದಿವೆ.
ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮಣ್ಣು ಸಡಿಲವಾಗಿರುವ ಕಾರಣ ಬಂಡೆ ಉರುಳಿರುವ ಸಾಧ್ಯತೆಯಿದೆ. ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಮಾಂದಲ್ಪಟ್ಟಿ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಮಣ್ಣು ಹಾಗೂ ಕಲ್ಲು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸದ್ಯಕ್ಕೆ ವಾಹನ ಸಂಚಾರ ಬಂದ್ ಆಗಿದೆ.
ಕಳೆದ 24 ಗಂಟೆಗಳಲ್ಲಿ ಭಾಗಮಂಡಲದಲ್ಲಿ 38 ಮಿ.ಮೀ, ಸಂಪಾಜೆಯಲ್ಲಿ 27, ನಾಪೋಕ್ಲು 17, ಮಡಿಕೇರಿ 14 ಮಿ.ಮೀ ಮಳೆಯಾಗಿದೆ. ಮಳೆ ಇಳಿಮುಖವಾಗಿದ್ದು, ಹಾರಂಗಿ ಜಲಾಶಯದ ಒಳಹರಿವು ಮತ್ತೆ ತಗ್ಗಿದೆ.
ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಸೋನೆ ಮಳೆಗೆ ಶಿಥಿಲಗೊಂಡಿದ್ದ ಮನೆಯೊಂದು ಮೈಸೂರಿನ ಗಾಯತ್ರಿಪುರಂನಲ್ಲಿ ಕುಸಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.