ADVERTISEMENT

ಮಹೇಶ್‌ ಸೇರ್ಪಡೆಯಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಸಿಕ್ಕಿದೆ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 7:55 IST
Last Updated 5 ಆಗಸ್ಟ್ 2021, 7:55 IST
ಕೊಳ್ಳೆಗಾಲ ಶಾಸಕ ಎನ್‌.ಮಹೇಶ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ಬಿಜೆಪಿಗೆ ಸೇರ್ಪಡೆಯಾದರು.
ಕೊಳ್ಳೆಗಾಲ ಶಾಸಕ ಎನ್‌.ಮಹೇಶ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ಬಿಜೆಪಿಗೆ ಸೇರ್ಪಡೆಯಾದರು.   

ಬೆಂಗಳೂರು: ಕೊಳ್ಳೆಗಾಲ ಶಾಸಕ ಎನ್‌.ಮಹೇಶ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಗುರುವಾರ ಬಿಜೆಪಿಯನ್ನು ಸೇರ್ಪಡೆಗೊಂಡರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದಿಂದ ಗೆದ್ದಿದ್ದ ಮಹೇಶ್‌ ಅವರು ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದರು. ಸರ್ಕಾರದ ಪತನದ ಬಳಿಮ ಅವರು ಬಿಜೆಪಿಯತ್ತ ವಾಲಿದರು. ಈ ಕಾರಣಕ್ಕೆ ಬಿಎಸ್‌ಪಿಯಿಂದ ಅವರನ್ನು ಉಚ್ಚಾಟಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮಹೇಶ್‌ ಚಳವಳಿಯಿಂದ ಬಂದವರು. ಅವರ ಸಂಘಟನಾ ಶಕ್ತಿ ದೊಡ್ಡ ಪ್ರಮಾಣದಲ್ಲಿದೆ. ಹೀಗಾಗಿ ಅವರು ಶಾಸಕರಾಗುವ ಮೊದಲೇ ದಲಿತ ಸಮುದಾಯದ ಹೃದಯವನ್ನು ಗೆದ್ದವರು. ಕೊಳ್ಳೆಗಾಲದ ಎಲ್ಲ ಜನಾಂಗ ಒಟ್ಟಾಗಿ ಇವರನ್ನು ಶಾಸಕರನ್ನಾಗಿ ಆರಿಸಿದ್ದಾರೆ. ಇತರ ಜನಾಂಗದವರೂ ಪ್ರೀತಿ ಹೊಂದಿದ್ದಾರೆ ಎಂದರು.

ADVERTISEMENT

ಮಹೇಶ್‌ ಚಿಂತನೆ ಮತ್ತು ಬಿಜೆಪಿ ಚಿಂತನೆ ವಿಭಿನ್ನ ಅಲ್ಲ. ಸರ್ವೇಜನ ಸುಖಿನೋ ಭವಂತು ಎಂಬ ನಮ್ಮ ಚಿಂತನೆ ಅವರಿಗೆ ಮನವರಿಕೆ ಆದ ಮೇಲೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವಾಗ ಸ್ವಯಂ ಪ್ರೇರಣೆಯಿಂದ ಬಂದು, ಬೆಂಬಲ ನೀಡಿದರು ಎಂದರು.

ರಾಜ್ಯದಲ್ಲಿ ಒಳ್ಳೆ ಸರ್ಕಾರ ಬರುತ್ತದೆ, ಯಡಿಯೂರಪ್ಪ ನೇತೃತ್ವದಲ್ಲಿ ತುಳಿತಕ್ಕೆ ಒಳಗಾದವರಿಗೆ ಸ್ವಾಭಿಮಾನದ ಬದುಕು ಕೊಡ್ತಾರೆ ಎಂಬ ವಿಶ್ವಾಸವಿಟ್ಟು ಬಂದಿದ್ದಾರೆ. ಅವರ ಎರಡು ವರ್ಷದ ಬಿಜೆಪಿ ಜತೆಗಿನ ಸಂಬಂಧದ ಕಾರಣ ಪಕ್ಷ ಸೇರಲು ನಿರ್ಣಯ ಮಾಡಲು ಸಾಧ್ಯವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಮಹೇಶ್‌ ಸೇವೆ ರಾಜ್ಯಕ್ಕೆ ಆಗಲಿ. ಅಷ್ಟು ಶಕ್ತಿ ಅವರಿಗಿದೆ. ವಿಜಯೇಂದ್ರ ಅವರು ವಾರಕ್ಕೆ ಒಮ್ಮೆ ಆ ಭಾಗದಲ್ಲಿ ಸುತ್ತಾಡಿ ಪಕ್ಷದ ಸಂಘಟನೆಯನ್ನು ಗಟ್ಟಿ ಮಾಡಿದ್ದಾರೆ. ವಿಜಯೇಂದ್ರ ಶ್ರಮಕ್ಕೆ ಮಹೇಶ್‌ ಶಕ್ತಿ ಸೇರಿದರೆ, ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಜಯಬೇರಿ ಭಾರಿಸುತ್ತದೆ. ಯಡಿಯೂರಪ್ಪ ಕಾರಣದಿಂದ ಆ ಭಾಗದಲ್ಲಿ ಸಾಮರಸ್ಯ, ಸಹೋದರತ್ವ ಭಾವನೆಯ ನೆಲೆಗಟ್ಟು ಸ್ಥಾಪನೆ ಆಗಿದೆ. ಇನ್ನೂ ಹಲವು ಸಮುದಾಯದ ನಾಯಕರು ಬಿಜೆಪಿ ಸೇರುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.