ಬೆಂಗಳೂರು: ಕಾಂಗ್ರೆಸ್ನ ಕೆಲವೇ ಸಮರ್ಥ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಒಬ್ಬರು. ಸಚಿವ ಸ್ಥಾನಕ್ಕೆ ಅರ್ಹ ವ್ಯಕ್ತಿ. ಆದರೆ, ಅವರಿಗೆ ಆ ಸ್ಥಾನ ಸಿಗಲಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸದ ಪೂಜಾರಿ ಹೇಳಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅನಗತ್ಯ ಟೀಕೆ ಮಾಡುತ್ತಾರೆ. ರಾಮ ಮಂದಿರವನ್ನು ಬೇರೆ ಸ್ಥಳದಲ್ಲಿ ಕಟ್ಟಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹ ಈಚೆಗೆ ಟೀಕಿಸಿದ್ದರು. ಅವರು ಯಾವಾಗ ಸರ್ವೆ ಇಲಾಖೆಗೆ ಸೇರಿದರು ಎಂದು ಪ್ರಶ್ನಿಸಿದ ಅವರು, ಶುದ್ಧ ಚಾರಿತ್ಯ ಇರುವವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡುವುದಿಲ್ಲ. ಹರಿಪ್ರಸಾದ್ ಅಂಥವರನ್ನು ಕಡೆಗಣಿಸುತ್ತದೆ ಎಂದರು.
ಕೋಟ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕ ಬೋಸರಾಜು, ಬೇರೆ ಪಕ್ಷದ ಕುರಿತು ಮಾತನಾಡುವ ಬದಲು, ನಿಮ್ಮದೇ ಪಕ್ಷದ ಶಾಸಕ ಬಸವಗೌಡ ಪಾಟೀಲ ಯತ್ನಾಳ ಅವರಿಗೆ ಸೂಕ್ತ ಸ್ಥಾನ ನೀಡಿ. ಕೇಂದ್ರ ಸಚಿವರಾಗಿದ್ದ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಯೇ ಸರಿ ಇಲ್ಲ ಎಂದು ಹೇಳಿದರು.
ಸಿದ್ದಗಂಗಾ ಮಠದಿಂದ ಅಕ್ಕಿ ಪಡೆಯುವ ಸ್ಥಿತಿಗೆ ಸರ್ಕಾರ ಬಂದಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ಸಜ್ಜನರಾದ ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ. ಪ್ರಧಾನಿ ಮೋದಿ ಅವರನ್ನು ಟೀಕಿಸುವ ಬದಲು ಸಚಿವ ಮಹದೇವಪ್ಪ ಹೇಳಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಲೋಕಸಭೆಗೆ ಸ್ಪರ್ಧಿಸಿ, ಆಯ್ಕೆಯಾದರೆ ಸಂಸತ್ನಲ್ಲಿ ಮೋದಿ ಅವರನ್ನು ಪ್ರಶ್ನಿಸಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.