ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಟ್ಟು ಹೊರಬರಲಿ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 14:42 IST
Last Updated 29 ನವೆಂಬರ್ 2021, 14:42 IST
   

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಅವರ ಸಂಪುಟದ ಸಚಿವರಿಗೇ ವಿಶ್ವಾಸ ಇಲ್ಲ ಎಂದಾದ ಮೇಲೆ ರಾಜೀನಾಮೆ ಕೊಟ್ಟು ಹೊರಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

ಮುಂದಿನ ಮುಖ್ಯಮಂತ್ರಿ ಮುರುಗೇಶ ನಿರಾಣಿ ಎಂಬ ಸಚಿವ ಈಶ್ವರಪ್ಪ ಹೇಳಿಕೆ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಶಾಸಕರು, ಸಚಿವರು ವಿಶ್ವಾಸ ಇಲ್ಲ ಎಂದಾಗ ಅವರು ರಾಜೀನಾಮೆ ನೀಡಿದರು. ಅದೇ ರೀತಿ ಬೊಮ್ಮಾಯಿ ಮೇಲೂ ಸಚಿವರು, ಶಾಸಕರಿಗೆ ವಿಶ್ವಾಸ ಇಲ್ಲ ಎಂದಾದ ಮೇಲೆ ಅವರು ಆ ಜಾಗದಲ್ಲಿ ಇರಬಾರದು ಎಂದರು.

ಮೊದಲಿನಿಂದಲೂ ಬಿಜೆಪಿಯವರಿಗೆ ಆಡಳಿತ ನಡೆಸಲು ಬರುವುದಿಲ್ಲ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿತವಾಗಿದೆ. ಜನರ ನೋವು ಗೊತ್ತಿಲ್ಲ. ಬಿಜೆಪಿಯಲ್ಲಿ ಒಬ್ಬರಿಗಿಂತ ಒಬ್ಬರಿಗೆ ಅಧಿಕಾರ ದಾಹ ಜಾಸ್ತಿ ಇದೆ ಎಂದು ಹೇಳಿದರು.

ಸೂಕ್ತ ಸ್ಥಾನಮಾನ: ಕಾಂಗ್ರೆಸ್‌ನ ಹಿರಿಯ ನಾಯಕ ಎಸ್.ಆರ್. ಪಾಟೀಲ ಅವರಿಗೆ ವಿಧಾನ ಪರಿಷತ್‌ ಚುನಾವಣೆ ಟಿಕೆಟ್ ಕೊಡುವ ಎಲ್ಲ ಅರ್ಹತೆ, ನಾಯಕತ್ವ ಇತ್ತು. ಅವರಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೂ ಇತ್ತು. ಆದರೆ, ಮುಂದಾಲೋಚನೆಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ಅವರಿಗೆ ಎಲ್ಲ ಸಿಗಲಿದೆ. ಅವರಿಗೆ ಹೆಚ್ಚಿನ ಜವಾವ್ದಾರಿ ಕೊಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.