ಬೆಂಗಳೂರು: ‘ಶಿವಮೊಗ್ಗ ಜಿಲ್ಲೆಯ ಸಾಗರದ ಡಿವೈಎಸ್ಪಿ (ಉಪ ಪೊಲೀಸ್ ವರಿಷ್ಠಾಧಿಕಾರಿ) ನನಗೆ ಕಿರುಕುಳ ನೀಡುತ್ತಿದ್ದಾರೆ, ರಕ್ಷಣೆ ಒದಗಿಸಿ’ ಎಂದು ಮುಕ್ತ ನ್ಯಾಯಾಲಯದಲ್ಲಿ ಮನವಿ ಮಾಡಿದ್ದ ಕೆಪಿಟಿಸಿಎಲ್ನ ಸಹಾಯಕ ಎಂಜಿನಿಯರ್ ಎಂ.ಜಿ.ಶಾಂತಕುಮಾರ ಸ್ವಾಮಿಗೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ಬಗ್ಗೆ ಆಕ್ಷೇಪಣೆ ಇದ್ದರೆ ಅದನ್ನು ಲಿಖಿತ ಅರ್ಜಿ ಮೂಲಕವೇ ಪರಿಹಾರ ಪಡೆಯುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಸಾಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಂತಕುಮಾರ ಸ್ವಾಮಿ ನಿನ್ನೆಯಷ್ಟೇ (ಆ.6) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ, ‘ಪೊಲೀಸರು ನನಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಮೌಖಿಕವಾಗಿ ದೂರಿದ್ದರು. ಇದಕ್ಕೆ ನ್ಯಾಯಮೂರ್ತಿಗಳು ‘ಈ ಬಗ್ಗೆ ಪರಿಶೀಲಿಸಿ ಬುಧವಾರ (ಆ.7) ಉತ್ತರಿಸಿ’ ಎಂದು ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರಿಗೆ ಸೂಚಿಸಿದ್ದರು.
ಇದರನ್ವಯ ಬಿ.ಎನ್.ಜಗದೀಶ್ ಬುಧವಾರ ಶಾಂತಕುಮಾರ ಸ್ವಾಮಿಯ ದೂರಿಗೆ ಸಂಬಂಧಿಸಿದಂತೆ ವಾಸ್ತವಾಂಶ ಏನಿದೆ ಎಂಬುದರ ಕುರಿತಾದ ಕೆಲವು ಡಿಜಿಟಲ್ ರೂಪದಲ್ಲಿನ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಸ್ವೀಕರಿಸಿದ ನ್ಯಾಯಪೀಠ, ಖುದ್ದು ಹಾಜರಿದ್ದ ಶಾಂತಕುಮಾರ ಸ್ವಾಮಿಗೆ, ‘ನಿಮ್ಮ ಯಾವುದೇ ಅಳಲು ಏನಿದ್ದರೂ ಅದನ್ನು ನಿಮ್ಮ ವಿರುದ್ಧ ಈಗಾಗಲೇ ದಾಖಲಿಸಲಾಗಿರುವ ಕ್ರಿಮಿನಲ್ ದೂರಿಗೆ ಅನುಗುಣವಾಗಿ ಲಿಖಿತ ಅರ್ಜಿ ಮುಖಾಂತರವೇ ಕೋರ್ಟ್ಗೆ ಮನವಿ ಸಲ್ಲಿಸಿ’ ಎಂದು ತಾಕೀತು ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.