ಬೆಳಗಾವಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಸಹಾಯಕ ಎಂಜಿನಿಯರ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜನವರಿ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್, ಈ ಹುದ್ದೆಗಳ ಆಯ್ಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಐದು ತಿಂಗಳ ಹಿಂದೆಯೇ ಪರೀಕ್ಷೆ ನಡೆಸಿದೆ. ಫಲಿತಾಂಶ ಪ್ರಕಟಿಸುವುದು ಹೋಗಲಿ, ಕನಿಷ್ಠ ಕೀ ಉತ್ತರವನ್ನು ಪ್ರಕಟಿಸಿಲ್ಲ ಎಂದು ಆಕ್ಷೇಪಿಸಿದರು.
ಇಂತಹ ಹುದ್ದೆಗಳಿಗೆ ನೇಮಕವಾದವರು ಆಡಳಿತ ಯಂತ್ರದ ಭಾಗವಾಗುತ್ತಾರೆ. ಕರ್ನಾಟಕದಲ್ಲಿ ಕೆಇಎ ಹಾಗೂ ಕರ್ನಾಟಕ ಲೋಕಸೇವಾ ಆಯೋಗವು ಯಾವುದೇ ಪರೀಕ್ಷೆ ನಡೆಸಿದರೂ ಫಲಿತಾಂಶ ಪ್ರಕಟಿಸಲು ವಿಳಂಬ ತೋರುತ್ತಲೇ ಇದೆ. ಈ ರೀತಿ ಧೋರಣೆಯಿಂದಾಗಿ ಮುಂದೆ ಆಡಳಿತಾಂಗಕ್ಕೆ ಬರುವವರು ಆರಂಭದಲ್ಲೇ ಸಿನಿಕರಾಗುವ, ವ್ಯವಸ್ಥೆ ಬಗ್ಗೆಯೇ ಹತಾಶರಾಗುವ ಸ್ಥಿತಿ ತಲುಪುವಂತಾಗಿದೆ. ಈ ಬೆಳವಣಿಗೆ ರಾಜ್ಯಕ್ಕೆ, ಆಡಳಿತಕ್ಕೆ ಒಳಿತು ತರುವುದಿಲ್ಲ. ಕೆಇಎ, ಕೆಪಿಎಸ್ಸಿಯನ್ನು ಚುರುಕುಗೊಳಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.