ಬೆಂಗಳೂರು: ‘ವಿಧಾನಸಭಾ ಅಧಿವೇಶನದಲ್ಲಿ ಶಾಸಕರೊಬ್ಬರು ಅತ್ಯಾಚಾರದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗುವುದಿಲ್ಲ...! ಮಹಿಳೆಯರು ಬದಲಾಗಿದ್ದಾರೆ. ಆದರೆ, ಗಂಡಸರು ಇನ್ನೂ ಬದಲಾಗಿಲ್ಲ. ಹಾಗಾಗಿ ಅವರ ವಿರುದ್ಧ ಯಾವ ಕ್ರಮವೂ ಜರುಗುವುದಿಲ್ಲ...’
– ವಿಧಾನಸಭೆಯ ಅಧಿವೇಶನದಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಕ್ಕೆ ಕಾದಂಬರಿಕಾರ್ತಿ ಶಶಿ ದೇಶಪಾಂಡೆ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಇದು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಲೇಖಕಿ ಇಂದಿರಾ ಚಂದ್ರಶೇಖರ್ ಭಾನುವಾರ ನಡೆಸಿಕೊಟ್ಟ ಸಂವಾದದಲ್ಲಿ ಅವರು ತಮ್ಮ, ‘ಸಬ್ವರ್ಷನ್ಸ್: ಎಸ್ಸೇಸ್ ಆನ್ ಲೈಫ್ ಆ್ಯಂಡ್ ಲಿಟರೇಚರ್’ ಕೃತಿಯ ಕುರಿತು ಮಾತನಾಡಿದರು.
‘ಬರಹಗಾರರು ಎಲ್ಲ ಸಂದರ್ಭಗಳಲ್ಲೂ ಮೌನ ವಹಿಸುವುದು ಸಮ್ಮತವಲ್ಲ. ಈಗಂತೂ ಧ್ವನಿಯೆತ್ತಿದರೆ ಸಾಕು, ಯಾವುದಾದರೂ ಒಂದು ಗುಂಪಿಗೆ ಸೇರಿಸಿ ನಮಗೆ ಮುದ್ರೆ ಒತ್ತಿ ಬಿಡುತ್ತಾರೆ. ಎಂ.ಎಂ.ಕಲಬುರ್ಗಿ ಹತ್ಯೆ ನಡೆದಾಗ ನಾನು ಸಾಹಿತ್ಯ ಅಕಾಡೆಮಿಯ ಸಮಿತಿಗೆ ರಾಜೀನಾಮೆ ಕೊಟ್ಟಿದ್ದೆ. ದೇಶದಲ್ಲಿ ಸಂಕಷ್ಟದ ಸಂದರ್ಭ ಎದುರಾದಾಗ ವ್ಯಕ್ತಿಗತವಾಗಿ ನಿರ್ದಿಷ್ಟ ನಿಲುವು ತಳೆಯಬೇಕೇ ವಿನಃ ಬರಹಗಾರರಾಗಿ ಅಲ್ಲ.’ ಎಂದು ಅವರು ಹೇಳಿದರು.
‘ಬೆಂಗಳೂರಿನಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಈ ನಗರ ಹಲವರ ಪಾಲಿಗೆ ದುಬಾರಿಯೆನಿಸಿಬಿಟ್ಟಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಎಷ್ಟೋ ಮಂದಿ ನನ್ನನ್ನು ಸ್ತ್ರೀವಾದಿಯಾಗಿ ಗುರುತಿಸುತ್ತಾರೆ. ನಾನು ಸ್ತ್ರೀವಾದಿ ಅಲ್ಲ.’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.