ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 86 ಅಡಿಗೆ ಕುಸಿದಿದ್ದು, ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಗೋಚರಿಸುತ್ತಿದೆ.
ಜಲಾಶಯದ ಹಿನ್ನೀರಿನಲ್ಲಿರುವ, ಹಳೆ ಉಂಡವಾಡಿ ಗ್ರಾಮದ ಸಮೀಪ ಇರುವ ದೇವಾಲಯದ ಗೋಪುರ ಸೇರಿ ಅರ್ಧದಷ್ಟು ಗೋಚರಿಸುತ್ತಿದೆ. ಈ ದೇವಾಲಯವನ್ನು ನೋಡಲು ಜಲಾಶಯದ ಹಿನ್ನೀರು ಪ್ರದೇಶಕ್ಕೆ ಜನರು ತಂಡೋಪತಂಡವಾಗಿ ಧಾವಿಸು ತ್ತಿದ್ದಾರೆ. ಕೆಆರ್ಎಸ್ ಬೃಂದಾವನಕ್ಕೆ ಭೇಟಿ ನೀಡುವ ಪ್ರವಾಸಿಗರು ಕೂಡ ಈ ದೇಗುಲವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಕೆಆರ್ಎಸ್ ಜಲಾಶಯ ನಿರ್ಮಾಣದಿಂದಾಗಿ ಪ್ರಸಿದ್ಧ ವೇಣು ಗೋಪಾಲಸ್ವಾಮಿ ದೇವಾಲಯ ಸೇರಿ ಹತ್ತಕ್ಕೂ ಹೆಚ್ಚು ದೇವಾಲಯಗಳು ಮುಳುಗಡೆಯಾದವು. ಈ ಪೈಕಿ 12ನೇ ಶತಮಾನದ ಹೊಯ್ಸಳ ಶೈಲಿಯ ವೇಣುಗೋಪಾಲಸ್ವಾಮಿ ದೇಗುಲವನ್ನು ಹರಿಖೋಡೆ ಫೌಂಡೇಷನ್ನವರು ಜಲಾಶಯದ ವಾಯವ್ಯ ದಡಕ್ಕೆ ಸ್ಥಳಾಂತರಿಸಿದ್ದರು. ಲಕ್ಷ್ಮಿನಾರಾಯಣ, ಕಣ್ಣೇಶ್ವರ ಇತರ ದೇವಾಲಯಗಳು ಜಲಾಶಯದಲ್ಲೇ ಉಳಿದಿವೆ. ಸಂಪೂರ್ಣ ಶಿಲೆಯಿಂದ ನಿರ್ಮಾಣ ವಾಗಿರುವುದರಿಂದ ನೀರಿನಲ್ಲಿದ್ದರೂ ಇವು ಇನ್ನೂ ಉಳಿದಿವೆ ಎಂದು ಕೆಆರ್ಎಸ್ ಗ್ರಾಮ ಪಂಚಾಯಿತಿ ಸದಸ್ಯ ಸಿ. ಮಂಜುನಾಥ್ ಹೇಳುತ್ತಾರೆ.
ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಗುರುವಾರದ ವೇಳೆಗೆ 86.64 ಅಡಿಗೆ (ಗರಿಷ್ಠ 124.80) ಕುಸಿದಿದೆ. ಬಳಕೆಗೆ ಬರುವ 5.65 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹ ಇದೆ. ವಿಶ್ವೇಶ್ವರಯ್ಯ ನಾಲೆ ಮತ್ತು ಅಣೆ ಒಡ್ಡಿನ ನಾಲೆಗಳು ಸೇರಿ ಜಲಾಶಯದಿಂದ 3,621 ಕ್ಯುಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 72.7 ಅಡಿಗಳಷ್ಟು ನೀರಿನ ಸಂಗ್ರಹವಿತ್ತು ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಾಸುದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.