ADVERTISEMENT

ಅನರ್ಹ ಶಾಸಕರು ಬಿಜೆಪಿ ಮನೆ ಅಳಿಯಂದಿರು: ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 20:08 IST
Last Updated 26 ಸೆಪ್ಟೆಂಬರ್ 2019, 20:08 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿರಸಿ: ‘ಶಾಸಕ ಸ್ಥಾನದಿಂದ ಅನರ್ಹಗೊಂಡಿರುವವರು ಬಿಜೆಪಿ ಪಾಲಿಗೆ ಮನೆ ಅಳಿಯಂದಿರಿದ್ದಂತೆ. ಅವರಿಗೆ ಯಾವುದೇ ಕಾರಣಕ್ಕೂ ದ್ರೋಹ ಮಾಡುವುದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ಸೋದೆ ವಾದಿರಾಜ ಮಠಕ್ಕೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರು ನಮ್ಮನ್ನೇ ನಂಬಿ ಬಂದಿದ್ದಾರೆ. ಅವರಿಂದಲೇ ಬಿಜೆಪಿ ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದೆ’ ಎಂದರು.

‘ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇರುವಾಗ ಒಳಗೊಳಗೇ ಬಡಿದಾಡುತ್ತಿದ್ದರು. ಈಗ ಬೀದಿಗೆ ಬಿದ್ದಿದ್ದಾರೆ. ಆಗಿನ ಕೆಟ್ಟ ಸರ್ಕಾರಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ನಾವು ಹೇಳಿದ್ದಲ್ಲ, ಅವತ್ತಿನ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಹೇಳಿದ್ದಾರೆ. ಇಂಥವರೊಡನೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಕೆಲವು ಶಾಸಕರು ಸರ್ಕಾರದಿಂದ ಹೊರಬಂದಿದ್ದರು’ ಎಂದು ಶಾಸಕರ ನಡೆಯನ್ನು ಸಮರ್ಥಿಸಿಕೊಂಡರು.

ADVERTISEMENT

‘ಸಿದ್ದರಾಮಯ್ಯನವರ ಚೇಲಾ ರೀತಿಯಲ್ಲಿ ಹಿಂದಿನ ಸ್ಪೀಕರ್ ರಮೇಶಕುಮಾರ್ ನಡೆದುಕೊಂಡಿದ್ದು ಇಡೀ ದೇಶಕ್ಕೆ ತಿಳಿದಿದೆ. ಮನೆ ಮಕ್ಕಳು 104 ಸ್ಥಾನ ಪಡೆದು ಸರ್ಕಾರ ಹಿಡಿಯಲು ಪ್ರಯತ್ನ ಮಾಡಿದ್ದಾರೆ. ಸರ್ಕಾರ ಭದ್ರಪಡಿಸಲು ಏಳೆಂಟು ಅಳಿಯಂದಿರು ಬಂದಿದ್ದಾರೆ ಎಂದರು.

ಗೋಹತ್ಯೆ ನಿಷೇಧ ಶೀಘ್ರ ಜಾರಿ: ಗೋಹತ್ಯೆ ನಿಷೇಧ ಮಾಡಲೇಬೇಕು ಎಂಬ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆದಷ್ಟು ಶೀಘ್ರ ಅದನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.