ಬೆಳಗಾವಿ: ಸತ್ಯಾಗ್ರಹ ಹತ್ತಿಕ್ಕುವ ಕೆಲಸಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದು ಸರಿಯಿಲ್ಲ.ದುಡಿಯುವ ಜನಏನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ರೈತ ಮುಖಂಡ ಹಾಗೂ ಸರ್ಕಾರಿ ಸಾರಿಗೆ ನೌಕರರ ಮುಷ್ಕರದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ನಮಗೆ ಹಸಿವಾಗಿದೆ. ಕುಟುಂಬ ನಿರ್ವಹಣೆ ಕಷ್ಟ ಆಗುತ್ತಿದೆ. ವೇತನ ಹೆಚ್ಚು ಮಾಡಿ ಎಂದು ಕೇಳಿದರೆ ಹೇಗೆ ದುರುದ್ದೇಶ ಆಗುತ್ತದೆ? ಸಾರಿಗೆ ನೌಕರರನ್ನು ಸರ್ಕಾರ ಏಕೆ ಕಡೆಗಣಿಸುತ್ತಿದೆ? ಆ ಇಲಾಖೆ ನಿರ್ನಾಮ ಮಾಡಿ ಖಾಸಗಿಯವರಿಗೆ ಕೊಡುವ ತರಾತುರಿಯಲ್ಲಿ ಇದ್ದಾರಾ? ಏನು ನಿಮ್ಮ ವಾದ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಯಾಗುತ್ತಿದೆ. ಸರ್ಕಾರ ತುರ್ತಾಗಿ ಸಮರ್ಪಕವಾದ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಸಗೊಬ್ಬರ ಬೆಲೆ ಏರಿಕೆ, ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ. ವಿಭಾಗ ಮಟ್ಟದ ಸಭೆ ಇದಾಗಿದೆ. ಸಾರಿಗೆ ನೌಕರರು ಸಹ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ಮುಷ್ಕರಕ್ಕೆ ಸರ್ಕಾರವೇ ಹೊಣೆ. ಸರ್ಕಾರಕ್ಕೆ ವಿವೇಕ ಇರಬೇಕಿತ್ತು ಎಂದು ಹೇಳಿದರು.
ಸರ್ಕಾರದ ನಿರ್ಧಾರವನ್ನು ಆಧರಿಸಿ, ಮುಷ್ಕರ ಮುಂದುವರಿವ ಬಗ್ಗೆ ತೀರ್ಮಾನ ಮಾಡಲಾಗುವುದು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ನೌಕರರ ನಡುವೆ ಒಪ್ಪಂದ ಆಗಿತ್ತು. ಆದರೆ ಈಗ ದಲ್ಲಾಳಿ ವ್ಯವಹಾರದಂತೆ ಸಚಿವರು ನಡೆದುಕೊಂಡಿದ್ದಾರೆ. ಸಾರಿಗೆ ನೌಕರರು ಹೊರತುಪಡಿಸಿ ಎಲ್ಲರಿಗೂ ಸೌಲಭ್ಯ ನೀಡಲಾಗಿದೆ.6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿಲ್ಲ. ಈಗ ದಲ್ಲಾಳಿ ವ್ಯವಹಾರ ಶುರು ಮಾಡಿದ್ದಾರೆ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.