ಬೆಂಗಳೂರು: ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ನೆರೆ, ಮಳೆಯಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದು, ₹3.36 ಕೋಟಿ ನಷ್ಟ ಸಂಭವಿಸಿದೆ.
ಆಗಸ್ಟ್ 4ರಿಂದ 11ರ ವರೆಗೆ ವಿವಿಧ ಡಿಪೋಗಳಿಂದ 4140 ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಈ ಬಸ್ಗಳು 9.44 ಲಕ್ಷ ಕಿ.ಮೀ ಕ್ರಮಿಸಬೇಕಿತ್ತು. 1545 ಮಾರ್ಗಗಳಲ್ಲಿ ಪೂರ್ಣ, 2595 ಮಾರ್ಗಗಳಲ್ಲಿ ಭಾಗಶಃ ಸಂಚಾರ ಕಡಿತಗೊಳಿಸಲಾಗಿತ್ತು.
ಮುಂಗಡ ಹಣ ವಾಪಸ್:ತೀವ್ರ ಮಳೆಗೆ ತುತ್ತಾಗಿದ್ದ ಪ್ರದೇಶಗಳಿಗೆ ಬಸ್ ಸಂಚಾರ ರದ್ದುಗೊಂಡು,ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೂ ಹಣ ವಾಪಸ್ ನೀಡಲಾಗಿದೆ. ಕೆಲವೆಡೆ ಸಂಸ್ಥೆಯೇ ಬಸ್ ಸಂಚಾರ ರದ್ದುಗೊಳಿಸಿ ಮುಂಗಡ ಹಣ ವಾಪಸ್ ನೀಡಿದ್ದರೆ, ಇನ್ನೂ ಕೆಲವರು ಅತಿವೃಷ್ಟಿ ಪ್ರದೇಶಕ್ಕೆ ಪ್ರಯಾಣ ಬೆಳೆಸದೆ ಮುಂಗಡ ಟಿಕೆಟ್ ಹಣ ಹಿಂಪಡೆದಿದ್ದಾರೆ. ಆಗಸ್ಟ್ 4ರಿಂದ 11ರ ವರೆಗೆ 38,872 ಮಂದಿ ಮುಂಗಡ ಟಿಕೆಟ್ ರದ್ದು ಪಡಿಸಿದ್ದರು. ₹2.24 ಕೋಟಿ ಜನರಿಗೆ ಮರಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.