ಬೆಂಗಳೂರು: ‘ನಾವೆಲ್ಲ ಒಕ್ಕೂಟ ವ್ಯವಸ್ಥೆಯಲ್ಲಿ ಬಾಳುತ್ತಿದ್ದೇವೆ. ಹೀಗಿರುವಾಗ ಎಲ್ಲಾ ಭಾಷಿಕರನ್ನೂ ಸಮಾನವಾಗಿ ಕಾಣಬೇಕಿದ್ದ ಕೇಂದ್ರ ಸರ್ಕಾರ ಭಾಷಾ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕು’ ಎಂದು ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ತಿಳಿಸಿದರು.
ಕನ್ನಡ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ 117ನೇ ಜನ್ಮದಿನ ಕಾರ್ಯಕ್ರಮದಲ್ಲಿ ಲೇಖಕ ಎಲ್.ಎನ್.ಮುಕುಂದರಾಜ್ (ಕುವೆಂಪು ಅನಿಕೇತನ), ಕವಯಿತ್ರಿ ಕೆ.ಆರ್.ಯಶಸ್ವಿನಿ (ಕುವೆಂಪು ಯುವಕವಿ) ಹಾಗೂ ಕಲಾವಿದ ಸಂಗಮೇಶ ಉಪಾಸೆ (ನಂ.ನಂಜಪ್ಪ ಚಿರಂತನ) ಅವರಿಗೆ ಪ್ರಶಸ್ತಿಗಳನ್ನುಪ್ರದಾನ ಮಾಡಿ ಶುಕ್ರವಾರ ಮಾತನಾಡಿದರು.
‘ಕುವೆಂಪು ಜನ್ಮದಿನಾಚರಣೆ ಅವರ ಸ್ಮರಣೆಗಷ್ಟೇ ಸೀಮಿತವಾಗಬಾರದು. ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಕುವೆಂಪು ಅವರು ತಮ್ಮ ಕೃತಿಗಳಲ್ಲಿ ವೈಚಾರಿಕತೆಗೆ ಒತ್ತುಕೊಟ್ಟಿದ್ದರು. ಪೌರಾಣಿಕ ವಸ್ತುಗಳನ್ನು ಆಯ್ಕೆಮಾಡಿಕೊಂಡು ಸಮಕಾಲೀನ ಸಂಗತಿಗಳನ್ನು ಸಮೀಕರಿಸಿದ್ದರು’ ಎಂದು ಹೇಳಿದರು.
ಸಂಗಮೇಶ ಉಪಾಸೆ ಅವರು ತಮ್ಮ ತಂದೆಯ ಹೆಸರಿನಲ್ಲಿ ದತ್ತಿ ಸ್ಥಾಪಿಸುವುದಾಗಿ ಘೋಷಿಸಿದರು. ಇದಕ್ಕಾಗಿಪ್ರಶಸ್ತಿ ಮೊತ್ತ ₹5 ಸಾವಿರ ಸೇರಿ ಒಟ್ಟು ₹1 ಲಕ್ಷ ನಗದನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೆ ನೀಡಿದರು. ಪ್ರತಿ ವರ್ಷ ವೈಚಾರಿಕ ಕೃತಿಕಾರರಿಗೆ ಪ್ರಶಸ್ತಿ ನೀಡುವ೦ತೆ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.