ಬೆಂಗಳೂರು: ವಿ.ಡಿ ಸಾವರ್ಕರ್ ಅವರ ಬಗ್ಗೆ ರಾಷ್ಟ್ರಕವಿ ಕುವೆಂಪು ಅವರಿಗೂ ಅಪಾರ ಗೌರವವಿತ್ತು ಎಂದು ಬಿಜೆಪಿ ಪ್ರತಿಪಾದಿಸಿದೆ.
ಇದಕ್ಕೆ ಪೂರಕವಾಗಿ, ಕುವೆಂಪು ಅವರ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ ಕೃತಿಯ 399ನೇ ಪುಟವನ್ನು ಬಿಜೆಪಿ ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
‘ಈ ಪುಟದ ಕೊನೆಯ ಪ್ಯಾರಾದಲ್ಲಿ, 'The Banished Indian Patriot.' ಬ್ರಿಟಿಷ್ ಸರ್ಕಾರ ವೀರ ಸಾವರ್ಕರ್ ಅವರಂತಹ ಅನೇಕ ದೇಶಭಕ್ತರನ್ನು ಹಿಡಿದು...’ ಎಂದು ಉಲ್ಲೇಖಿಸಲಾಗಿದೆ. ಇದನ್ನೇ ತನ್ನ ವಾದಕ್ಕೆ ಬಳಸಿಕೊಂಡಿರುವ ಬಿಜೆಪಿ, ಸಾವರ್ಕರ್ ಬಗ್ಗೆ ಕುವೆಂಪು ಅವರಿಗೆ ಅಪಾರ ಗೌರವವಿತ್ತು’ ಎಂದು ವಾದಿಸಿದೆ.
‘ಸಾವರ್ಕರರಂಥ ಕ್ರಾಂತಿಕಾರಿಗಳ ಬಗ್ಗೆ ರಾಷ್ಟ್ರವಾದಿ ಪ್ರಜ್ಞೆಯ ಮೇರುಕವಿ ಕುವೆಂಪು ಅವರಿಗೆ ಅಪಾರ ಗೌರವವಿತ್ತು. ತಮ್ಮ ಆತ್ಮಕತೆ 'ನೆನಪಿನ ದೋಣಿಯಲ್ಲಿ' ಅವರು ದಾಖಲಿಸಿರುವ ಎರಡು ಸಾನೆಟ್ಟುಗಳೇ ಇದಕ್ಕೆ ಸಾಕ್ಷಿ. ಇದು ಭಾರತದ ಕ್ಷಾತ್ರ ಚೈತನ್ಯಕ್ಕೆ ಈ ನೆಲದ ಕವಿಚೈತನ್ಯದ ಗೌರವವಾಗಿದೆ’ ಎಂದು ಬಿಜೆಪಿ ಹೇಳಿದೆ.
ಸಾವರ್ಕರ್ ಫ್ಲೆಕ್ಸ್ ಅಳವಡಿಸುವ ಕುರಿತು ಇತ್ತೀಚೆಗೆ ಶಿವಮೊಗ್ಗದಲ್ಲಿ ಘರ್ಷಣೆ ಸಂಭವಿಸಿತ್ತು. ಈ ವೇಳೆ ವ್ಯಕ್ತಿಯೊಬ್ಬರಿಗೆ ಚೂರಿ ಇರಿಯಲಾಗಿತ್ತು. ಅಲ್ಲಿಂದೀಚೆಗೆ ಸಾವರ್ಕರ್ ಕುರಿತಂತೆ ರಾಜ್ಯದಲ್ಲಿ ಭಾರಿ ಚರ್ಚೆಗಳು ನಡೆದಿವೆ. ಅಲ್ಲಲ್ಲಿ ಅವರ ಫ್ಲೆಕ್ಸ್ಗಳನ್ನು ಅಳವಡಿಸಿದ ಪ್ರಸಂಗಗಳು ಘಟಿಸಿವೆ.
ಇತ್ತೀಚೆಗೆ ವಿಜಯಪುರದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಕೂರಿಸುವ ಪ್ರತಿ ಗಣೇಶನ ಮೂರ್ತಿ ಬಳಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೊ ಇಡಬೇಕು. ಫೋಟೊ ನಾನೇ ಕೊಡುತ್ತೇನೆ’ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.