ADVERTISEMENT

ಕೊರೊನಾ ಸಮಸ್ಯೆಗಾಗಿ‌ ಶಾಸಕರು, ಎಂಎಲ್‌ಸಿಗಳು ಒಂದು ಲಕ್ಷ ಕೊಡಬೇಕು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 9:34 IST
Last Updated 27 ಮಾರ್ಚ್ 2020, 9:34 IST
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ   

ಬೆಂಗಳೂರು: ನಾವು ಪಕ್ಷದ ಕಡೆಯಿಂದ ಸಹಾಯವಾಣಿಯನ್ನು ತೆರೆದು ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡುತ್ತೇವೆ. ರಮೇಶ್ ಕುಮಾರ್ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ರಚಿಸಿದ್ದೇವೆ. ಈ ಟಾಸ್ಕ್‌ಪೋರ್ಸ್ ಏನ್ಮಾಡಬೇಕು ನೋಡಿಕೊಳ್ಳುತ್ತದೆ. ಕೊರೊನಾ ಎಫೆಕ್ಟ್‌ನಿಂದ ಜನರಿಗೆ ಬೇಕಾದ ಸೌಲಭ್ಯ ಕಲ್ಪಿಸಿಕೊಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಎಂಐ ಮುಂದಕ್ಕೆ ಹಾಕುವಂತೆ ನಾವು ಹೇಳಿದ್ದೆವು. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ನಾವು ಕೇಂದ್ರ ಸರ್ಕಾರಕ್ಕೆ ಅಭಿನಂದಿಸುತ್ತೇವೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಹೀಗಾಗಿ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಇಲ್ಲಿವರೆಗೆ ಸರ್ವ ಪಕ್ಷ ಸಭೆ ಕರೆದಿಲ್ಲ. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಆಸ್ಪತ್ರೆಗಳಲ್ಲಿ ಸರಿಯಾದ ಕಿಟ್ ವ್ಯವಸ್ಥೆಯಿಲ್ಲ. ಇನ್ನು ಸಾಕಷ್ಟು ಸಮಸ್ಯೆ ಅಲ್ಲಿದೆ. ಅದನ್ನು ಪರಿಹರಿಸಲು ಸರ್ಕಾರ ಒದ್ದಾಡುತ್ತಿದೆ. ರೇಷ್ಮೆ ಸೇರಿದಂತೆ ರೈತರು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಗಳನ್ನು ಕೂಡಲೇ ಓಪನ್ ಮಾಡಿಸಬೇಕು. ಹೆಚ್ಚು ದಿನ ಪದಾರ್ಥಗಳನ್ನು ಇಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ರೈತರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು. ಇದರ ಬಗ್ಗೆ ಸರ್ಕಾರಕ್ಕೆ ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

ADVERTISEMENT

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಇಲ್ಲಿಯವರೆಗೆ ವಿಪಕ್ಷಗಳನ್ನ‌ು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು. ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಪ್ರತಿ ಶಾಸಕರು, ಎಂಎಲ್‌ಸಿಗಳು ಒಂದು ಲಕ್ಷ ನೀಡಬೇಕು. ಇರುವವರು ಹೆಚ್ಚಿಗೆ ಕೊಟ್ಟರೂ ಪರವಾಗಿಲ್ಲ. ಇದನ್ನು ನಾವು ಕೊರೊನಾ ಸಮಸ್ಯೆಗೆ ಬಳಸಿಕೊಳ್ಳುತ್ತೇವೆ. ಆದರೆ ನಮ್ಮ ಕಾರ್ಯಕರ್ತರು ನೇರವಾಗಿ ಜನರ ಬಳಿ ಹೋಗಬಾರದು. ಅಂತವರು ಪಕ್ಷದ ಜಿಲ್ಲಾ ಕಚೇರಿಗೆ ನೀಡಬೇಕು ಎಂದು ಮನವಿ ಮಾಡಿದರು.

ಮಹಾಮಾರಿ ಕೊರೊನಾ ಎಲ್ಲಾ ಕಡೆ ಹಬ್ಬಿದೆ. ಜನರನ್ನು ಭಯಬೀತಗೊಳಿಸಿದೆ, ಆತಂಕಕ್ಕೀಡುಮಾಡಿದೆ. ಪ್ರಧಾನಿಯವರು 21 ದಿನ ದೇಶ ಲಾಕ್‌ಡೌನ್ ಘೋಷಿಸಿದ್ದಾರೆ. ಇದನ್ನು ನಮ್ಮ ಪಕ್ಷ ಸ್ವಾಗತಿಸಿ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದೆ. ತಡವಾಗಿಯಾದರೂ ಸರ್ಕಾರ ಉತ್ತಮ ನಿರ್ಧಾರ ಮಾಡಿದೆ. ಕೊರೊನಾ ವೈರಸ್‌ಗೆ ಔಷಧಿಯೇ ಇಲ್ಲ. ಅದಕ್ಕೆ ಸೋಶಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡಬೇಕು ಎಂದರು.

ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಪಿಎಂಗೆ ಪತ್ರ ಬರೆದಿದ್ದಾರೆ. ಪ್ರಧಾನಿ ನಿಲುವನ್ನು ಅಭಿನಂದಿಸಿ, ಸಲಹೆ ಕೊಟ್ಟಿದ್ದಾರೆ. ಚಿದಂಬರಂ ಕೂಡ 10 ಸಲಹೆಗಳನ್ನು ಕೇಂದ್ರಕ್ಕೆ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ನಿನ್ನೆ ಕೆಲವು ಘೋಷಣೆ ಮಾಡಿದ್ದಾರೆ. ಆರ್‌‌ಬಿಐ ಗವರ್ನರ್ ಇಎಂಐ ಅನ್ನು ಮೂರು ತಿಂಗಳು ಮುಂದೂಡಿದ್ದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ರೈತರ ಬೆಳೆಗಳನ್ನು ಹಾಫ್‌ಕಾಮ್ಸ್ ಮೂಲಕ ಖರೀದಿಸಬೇಕು. ರೇಷ್ಮೆ ಗೂಡನ್ನು ಖರೀದಿಸಬೇಕು. ಹೆಚ್ಚು ದಿನ ಗೂಡನ್ನ ಶೇಖರಿಸೋಕೆ ಸಾಧ್ಯವಿಲ್ಲ. ಫ್ರೀ ಮಾನ್ಸೂನ್ ಹಳೆ ಮೈಸೂರು ಭಾಗದಲ್ಲಿ ಆಗುತ್ತದೆ. ಇಂದಿರಾ ಕ್ಯಾಂಟೀನ್ ಮಾಡಿದ್ದು ನಿರ್ಗತಿಕರು, ಬಡವರಿಗಾಗಿ. ರಾಜ್ಯದಲ್ಲಿ 3,80,400 ಕ್ಯಾಂಟೀನ್ ಇವೆ. ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಎರಡು ತಿಂಗಳು ಪಡಿತರ ಕೊಡುತ್ತೇವೆ ಎಂದಿರುವುದನ್ನು ಈಗಲೇ ಆರಂಭಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಕಡಿಮೆ ದರದಲ್ಲಿ ಪಡಿತರ ನೀಡಲು ನಿರ್ಮಲಾ ಸೀತಾರಾಮನ್ ಹೇಳಿದ್ದು, ನಮ್ಮದೇ ಯೋಜನೆಯನ್ನು ಅವರು ಅಳವಡಿಸಿಕೊಂಡಿದ್ದಾರೆ. ಇದು ಒಳ್ಳೆಯದು ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಜನರಿಗೆ ಮನೆಮನೆಗೆ ಮಾಸ್ಕ್ ನೀಡಬೇಕು. ಡಿಹೆಚ್‌ಒ ಜೊತೆ ನಾನು ಮಾತನಾಡಿದ್ದೇನೆ. ವೆಂಟಿಲೇಟರ್ ಇಲ್ಲ, ಮಾಸ್ಕ್ ಸಿಗ್ತಿಲ್ಲ ಅಂತ ಹೇಳಿದ್ದಾರೆ. ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೂ ಕಿಟ್ ಇಲ್ಲ. ಇದನ್ನು ಮೊದಲು ಸರ್ಕಾರ ಒದಗಿಸಿಕೊಡಬೇಕು. ಮೊದಲು ಅವರನ್ನು ರಕ್ಷಣೆ ಮಾಡಬೇಕಾಗಿದ್ದು, ಸರ್ಕಾರದ ಕರ್ತವ್ಯ. ವಿದೇಶದಿಂದ ಬಂದವರನ್ನು ಐಸೋಲೇಶನ್ ನಲ್ಲಿಡಬೇಕು. ಇವರು ಮನೆಯಲ್ಲೇ ಕ್ವಾರಂಟೈನ್ ಮಾಡ್ತೇವೆ ಅಂತಾರೆ. ಇದು ಅದೇಗೆ ಕ್ವಾರಂಟೈನ್ ಮಾಡ್ತಾರೋ, ಮೆಂಟೇನ್ ಮಾಡ್ತಾರೋ ಗೊತ್ತಿಲ್ಲ. ಪ್ರತಿ ಜಿಲ್ಲೆಯಲ್ಲಿ 200/300 ಐಸೋಲೇಶನ್ ವಾರ್ಡ್‌ ನಿರ್ಮಿಸಬೇಕು. ಇನ್ನೂ ಸೋಂಕಿತರು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಈಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.