ADVERTISEMENT

ಎಲ್ಲಾ ಸಾರಿಗೆ ನೌಕರರಿಗೂ ಕೊರೊನಾ ಪರೀಕ್ಷೆ: ಸಾರಿಗೆ ಸಚಿವ ಲಕ್ಷ್ಮಣ ಸವದಿ

ಸಂಸ್ಥೆಗಳಿಂದಲೇ ಸೋಂಕಿತರ ಆರೈಕೆ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:04 IST
Last Updated 26 ಜೂನ್ 2020, 17:04 IST
ಸಾರಿಗೆ ಸಚಿವ ಲಕ್ಷ್ಮಣ ಎಸ್.ಸವದಿ
ಸಾರಿಗೆ ಸಚಿವ ಲಕ್ಷ್ಮಣ ಎಸ್.ಸವದಿ   

ಬೆಂಗಳೂರು: ‘ಸಾರಿಗೆ ಸಂಸ್ಥೆಗಳ ಎಲ್ಲಾ ನೌಕರರಿಗೆ ಘಟಕ (ಡಿಪೊ) ಮಟ್ಟದಲ್ಲೇ ಕೊರೊನಾ ಪರೀಕ್ಷೆ ನಡೆಸಲಾಗುವುದು’ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

‘ಸಿಬ್ಬಂದಿ ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಕೊರೊನಾ ಸೋಂಕು ದೃಢಪಟ್ಟ ಸಿಬ್ಬಂದಿಯ ಪೂರ್ಣ ಆರೈಕೆ ಜವಾಬ್ದಾರಿಯನ್ನು ಸಾರಿಗೆ ಸಂಸ್ಥೆಗಳೇ ನೋಡಿಕೊಳ್ಳಲಿವೆ’ ಎಂದು ಅವರು ಹೇಳಿದ್ದಾರೆ.

‘ನಾಲ್ಕೂ ಸಂಸ್ಥೆಗಳ ಬಸ್‌ಗಳಲ್ಲಿಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವ ಕಾರಣ ವರಮಾನ ಇಳಿಮುಖವಾಗಿದ್ದು, ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆ.ಅನಗತ್ಯವಾಗಿದ್ದ ಹೊರಗುತ್ತಿಗೆ ಸಿಬ್ಬಂದಿ ಕಡಿಮೆ ಮಾಡಲಾಗುವುದು. ಗೃಹ ರಕ್ಷಕ ಸಿಬ್ಬಂದಿ ಬದಲಿಗೆ ಸಂಸ್ಥೆಗಳಲ್ಲಿನ ಆಸಕ್ತ ಸಿಬ್ಬಂದಿಯನ್ನೇ ಭದ್ರತಾ ಕೆಲಸಕ್ಕೆ ನಿಯೋಜಿಸಲಾಗುವುದು. ಮಾಜಿ ಸೈನಿಕರಿಗೆ ಪ್ರಥಮ ಆದ್ಯತೆ ನೀಡಲಾಗುವುದು’ ಎಂದು ಅವರು ವಿವರಿಸಿದ್ದಾರೆ.

ADVERTISEMENT

‘ಎಲ್ಲರಿಗೂ ಕರ್ತವ್ಯ ನಿರ್ವಹಿಸಲು ಅವಕಾಶ ದೊರಕಿಸಲು ರೊಟೇಷನ್ ಆಧಾರದಲ್ಲಿ ಸಿಬ್ಬಂದಿಗಳನ್ನು ಇದೇ ಮೊದಲ ಬಾರಿಗೆ ನಿಯೋಜಿಸಲಾಗುತ್ತಿದೆ.55 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಅವರ ಆರೋಗ್ಯದ ಆಧಾರದ ಮೇಲೆ ಉದಾರವಾಗಿ ರಜೆ ಮಂಜೂರು ಮಾಡಲು ನಿರ್ದೇಶನ ನೀಡಲಾಗಿದೆ. ಗರ್ಭಿಣಿ ಸಿಬ್ಬಂದಿಗೆ ಲಘು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸ್ಯಾನಿಟೈಸ್ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರು ಯಾವುದೇ ಭಯ ಇಲ್ಲದೆ ಸಂಚರಿಸಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.