ADVERTISEMENT

ರಜೆ ತಾರತಮ್ಯ: ಪ್ರೌಢಶಾಲಾ ಶಿಕ್ಷಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:02 IST
Last Updated 20 ಏಪ್ರಿಲ್ 2021, 17:02 IST

ಬೆಂಗಳೂರು: ಇದೇ ಮೊದಲ ಬಾರಿಗೆ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಬೇರೆ ಅವಧಿಯಲ್ಲಿ ಬೇಸಿಗೆ ರಜೆ ಘೋಷಿಸಲಾಗಿದೆ. ರಾಜ್ಯ ಸರ್ಕಾರದ ಈ ನಡೆ, ಪ್ರೌಢಶಾಲಾ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಮೇ 1ರಿಂದ ಜೂನ್‌ 14ರವರೆಗೆ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರಿಗೆಜೂನ್‌ 15ರಿಂದ ಜುಲೈ 14ರವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ.

‘ಬೇಸಿಗೆ ರಜೆ ನೀಡುವ ವಿಷಯದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ಈ ವಿಚಾರವನ್ನು ಸರ್ಕಾರ ಮರುಪರಿಶೀಲಿಸಿ, ಮಾರ್ಗಸೂಚಿ ಬದಲಿಸಬೇಕು’ ಎಂದು ಪ್ರೌಢ ಶಾಲೆಯ ಶಿಕ್ಷಕರು ಆಗ್ರಹಿಸಿದ್ದಾರೆ.

ADVERTISEMENT

’ಇಲ್ಲಿಯವರೆಗೆ ಒಂದೇ ರೀತಿ ಇತ್ತು. ಈ ಬಾರಿಯೂ ಕೋವಿಡ್‌ ಜೊತೆಗೆ ಬಿಸಿಲಿನ ಸಮಸ್ಯೆ ಇದೆ. ಸದ್ಯ ನಿಗದಿಪಡಿಸಿರುವಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್‌ 21ರಿಂದ ಆರಂಭಗೊಂಡು ಜುಲೈ 5ರವರೆಗೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಎಲ್ಲ ಆರೂ ವಿಷಯಗಳ ಶಿಕ್ಷಕರೂ ಶಾಲೆಗಳಲ್ಲಿ ಹಾಜರಿರಬೇಕಾಗುತ್ತದೆ. ಬಳಿಕ ಮೌಲ್ಯಮಾಪನದಲ್ಲಿ ಭಾಗವಹಿಸಬೇಕು. ಪರೀಕ್ಷೆ ಮತ್ತು ಮೌಲ್ಯಮಾಪನ ಕೆಲಸದಲ್ಲಿಯೇ ಬೇಸಿಗೆ ರಜೆ ಮುಗಿದು ಹೋಗುತ್ತದೆ. ಇದರಿಂದ ನಮಗೆ ಅನ್ಯಾಯವಾಗುತ್ತದೆ’ ಎನ್ನುವುದು ಪ್ರೌಢ ಶಿಕ್ಷಕರ ಆಕ್ಷೇಪ.

ದಾರಿತಪ್ಪಿಸಿದ ಅಧಿಕಾರಿಗಳು-ಶಹಾಪೂರ

‘ಬೇಸಿಗೆ ರಜೆ ಘೋಷಿಸುವ ವಿಷಯದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ರೀತಿ ಸರ್ಕಾರವನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಅರುಣ್‌ ಶಹಾಪೂರ ಹೇಳಿದ್ದಾರೆ.

ರಜೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ಸರ್ಕಾರ ಈ ತಾರತಮ್ಯವನ್ನು ಕೂಡಲೇ ಸರಿಪಡಿಸಬೇಕು. ಶಿಕ್ಷಣ ಮತ್ತು ಶಿಕ್ಷಕರಿಗೆ ಸಮಸ್ಯೆ ಆಗದಂತೆ ಈ ಗೊಂದಲವನ್ನು ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.