ಕಲಬುರ್ಗಿ:ಇಲ್ಲಿನ ಮಹಾತ್ಮ ಗಾಂಧಿ ಕುಷ್ಠರೋಗಿಗಳ ಆಶ್ರಯ ಕಾಲೊನಿಯಲ್ಲಿ ಆರೈಕೆ ಕೇಂದ್ರವಿದೆ. ಅದನ್ನು ಸರ್ಕಾರ ಇಲ್ಲವೇ ದಾನಿಗಳು ಕೊಟ್ಟಿದ್ದಲ್ಲ. ಬದಲಾಗಿ ಕುಷ್ಠರೋಗಿಗಳು ಹಾಗೂ ಅವರ ಕುಟುಂಬದವರೇ ಸ್ವಂತ ಖರ್ಚಿನಲ್ಲಿ ಇದನ್ನು ತೆರೆದಿದ್ದಾರೆ!
ಈ ಕಾಲೊನಿಯಲ್ಲಿ 260 ಮಂದಿ ವಾಸವಾಗಿದ್ದಾರೆ.ರೋಗಿಗಳು ಡ್ರೆಸ್ಸಿಂಗ್ ಹಾಗೂ ಇತರ ಸಣ್ಣಪುಟ್ಟ ಆರೋಗ್ಯ ಸೌಲಭ್ಯಕ್ಕಾಗಿ ದೂರದ ಆರೋಗ್ಯ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಇದನ್ನು ತಪ್ಪಿಸಲು ಐವರು ಯುವಕರು ಸೇರಿ 2002ರಲ್ಲಿ ಯೋಜನೆಯನ್ನು ಸಿದ್ಧಪಡಿಸಿದರು.
ತಮ್ಮ ಸಂಪಾದನೆಯಲ್ಲಿ ಪ್ರತಿ ತಿಂಗಳು ತಲಾ ₹ 1 ಸಾವಿರ ಸಂಗ್ರಹಿಸಿ ವೈದ್ಯಕೀಯ ಅವಶ್ಯಕತೆ ಪೂರೈಸತೊಡಗಿದರು. ಇಂತಹ ಪ್ರಯತ್ನ ಯಶಸ್ವಿಯಾಗಿದ್ದು, ಇದಕ್ಕೆ ‘ಮಹಾತ್ಮಗಾಂಧಿ ಕುಷ್ಠರೋಗಿಗಳ ಆರೋಗ್ಯ ಕೇಂದ್ರ’ ಎಂದು ಹೆಸರಿಡಲಾಗಿದೆ.
ಇದೆಲ್ಲಕ್ಕೂ ಬೆನ್ನೆಲುಬಾಗಿ ನಿಂತಿದ್ದು ಆಟೊ ಚಾಲಕ ಹಣಮಂತ ದೇವನೂರ.ಕುಷ್ಠರೋಗಿ ತಾಯಿಯ ನೋವನ್ನು ಕಣ್ಣಾರೆ ಕಂಡವರು. ವೈದ್ಯರು ಎಷ್ಟೋ ಬಾರಿ ಕುಷ್ಠರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿರಲಿಲ್ಲ. ಆಸ್ಪತ್ರೆಗೆ ಹೋಗುವುದು ರೋಗಿಗಳಿಗೆ ಕಷ್ಟವಾಗಿತ್ತು.
ಈ ವ್ಯವಸ್ಥೆಯಿಂದ ಬೇಸತ್ತ ಅವರು, ತಾಯಿಗೆ ತಾವೇ ಪ್ರಥಮ ಚಿಕಿತ್ಸೆ ಮಾಡತೊಡಗಿದರು. ದಿನಗಳು ಕಳೆದಂತೆ ಈ ಸೇವೆಯನ್ನು ಕಾಲೊನಿಯ ಎಲ್ಲ ರೋಗಿಗಳಿಗೂ ನೀಡಲು ಶುರು ಮಾಡಿದರು. 16 ವರ್ಷಗಳಿಂದ ನಿರಂತರವಾಗಿಎಲ್ಲರೋಗಿಗಳಿಗೆ ಇವರೇ ಆರೈಕೆ ಮಾಡುತ್ತಾರೆ. ಇವರ ಸೇವೆಗಾಗಿ 2008ರಲ್ಲಿ ಅಂದಿನಉಪರಾಷ್ಟ್ರಪತಿ ರಾಷ್ಟ್ರೀಯ ಪುರಸ್ಕಾರ’ ನೀಡಿದ್ದಾರೆ.
**
ಆರೈಕೆ ಕೇಂದ್ರಕ್ಕೆ ಕಾಯಂ ಆಗಿ ಒಬ್ಬರು ಶುಶ್ರೂಷಕರನ್ನು ನೇಮಿಸುವ ವ್ಯವಸ್ಥೆ ಆಗಬೇಕು.
–ಹಣಮಂತ ದೇವನೂರ, ಕುಷ್ಠರೋಗಿಗಳ ಸೇವಾ ಸಂಘದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.