ಪಿರಿಯಾಪಟ್ಟಣ: ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಶಾಲಾ ಕಾಲೇಜು ಆರಂಭಿಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿರುವುದು ಕಂಡು ಬಂದಿದೆ.
ಶಾಲಾ ಕಟ್ಟಡದಲ್ಲಿಯೇ 15 ದಿನಗಳಿಂದ ತರಗತಿ ನಡೆಸಲಾಗುತ್ತಿದ್ದು, ಪ್ರತಿ ಕೊಠಡಿಯಲ್ಲಿ 40ರಿಂದ 50 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.
‘ಸದ್ಯಕ್ಕೆ ಶಾಲಾ ಕಾಲೇಜು ತೆರೆಯಬಾರದೆಂಬ ಸೂಚನೆ ಇದ್ದರೂ ಸಂಸ್ಥೆಯು ನಿಯಮ ಪಾಲಿಸದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದೆ. ಶಾಲೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದು ತಾಲ್ಲೂಕಿನಪ್ರಭಾರತಹಶೀಲ್ದಾರ್ ಬಸವರಾಜು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಆಡಳಿತಾಧಿಕಾರಿ ಸುಧಾಕರ್, ‘ಯಾವುದೇ ತರಗತಿ ನಡೆಸುತ್ತಿರಲಿಲ್ಲ. ವಿದ್ಯಾರ್ಥಿಗಳ ಮೊಬೈಲ್ಗೆ ಗೂಗಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದನ್ನು ಹೇಳಿ ಕೊಡಲಾಗುತ್ತಿತ್ತು’ ಎಂದರು.
ಪಿಯುಸಿಗೆ ಪಾಠ: ‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಪಾಠ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ.ಪ್ರೌಢಶಾಲಾ ಮಕ್ಕಳಿಗೆಪಾಠ ಮಾಡಿದ್ದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಇಒ ವೈ.ಕೆ.ತಿಮ್ಮೇಗೌಡ ತಿಳಿಸಿದರು.
ಅನುಮತಿ ಇಲ್ಲ: ‘ಆನ್ಲೈನ್ ಹೊರತುಪಡಿಸಿ ಯಾವುದೇ ಕಾರಣಕ್ಕೆ ತರಗತಿಯಲ್ಲಿ ಸೇರಿಸಿ ಪಿಯುಸಿ ವಿದ್ಯಾರ್ಥಿಗಳಿಗೂಪಾಠ ಮಾಡಲು ಅನುಮತಿ ಇಲ್ಲ. ಪಿರಿಯಾಪಟ್ಟಣದ ಶಿಕ್ಷಣ ಸಂಸ್ಥೆಯ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ತರಗತಿ ನಡೆಸುತ್ತಿದ್ದರೆ ನೋಟಿಸ್ ನೀಡಲಾಗುವುದು’ ಎಂದು ಡಿಡಿಪಿಯು ಜೆ.ಆರ್.ಗೀತಾ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.