ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು
ಪ್ರಜಾವಾಣಿ ಚಿತ್ರ
ಬೆಳಗಾವಿ: 'ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕುರಿತಾಗಿ ಕೆಟ್ಟ ಪದ ಬಳಸಿದ್ದು ಖಂಡನೀಯ. ತಕ್ಷಣವೇ ಅವರ ಸದಸ್ಯತ್ವ ವಜಾಗೊಳಿಸಬೇಕು' ಎಂದು ಲಿಂಗಾಯತ ಪಂಚಮಸಾಲಿ ಮುಖಂಡ ಗುಂಡು ಪಾಟೀಲ ಒತ್ತಾಯಿಸಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭಾರತದಲ್ಲಿ ಮಹಿಳೆಯರಿಗೆ ಅಪಾರವಾದ ಗೌರವವಿದೆ. ಹೆಣ್ಣು ಮಕ್ಕಳಿಗೆ ದೈವೀಸ್ಥಾನ ಕೊಡಲಾಗಿದೆ. ಹೀಗಿರುವಾಗ, ರವಿ ಅವರು ಅವಾಚ್ಯ ಶಬ್ದ ಬಳಸಿ, ಇಡೀ ಮಾನವ ಕುಲಕ್ಕೆ ಅಪಮಾನ ಮಾಡಿದ್ದಾರೆ. ನಮ್ಮ ಸಮುದಾಯ ಇದನ್ನು ತೀವ್ರವಾಗಿ ಖಂಡಿಸುತ್ತದೆ' ಎಂದರು.
'ಇಡೀ ಸಮುದಾಯದವರು ಲಕ್ಷ್ಮಿ ಹೆಬ್ಬಾಳಕರ ಪರವಾಗಿದ್ದೇವೆ. ರವಿ ಮುಂದೆಯೂ ಇಂಥ ಹೇಳಿಕೆಗಳನ್ನು ಕೊಟ್ಟರೆ ಹೋರಾಡುತ್ತೇವೆ' ಎಂದು ಹೇಳಿದರು.
ಮುಖಂಡ ಅಡಿವೇಶ ಇಟಗಿ ಮಾತನಾಡಿ, 'ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ಸಿ.ಟಿ.ರವಿ ನೀಡಿದ ಹೇಳಿಕೆ ಖಂಡಿಸಿ, ನಗರದಲ್ಲಿ ಡಿ. 21ರಂದು ಹೆಬ್ಬಾಳಕರ ಅಭಿಮಾನಿ ಬಳಗದವರು ಪ್ರತಿಭಟನೆ ಮಾಡಲಿದ್ದೇವೆ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಿದ್ದೇವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.