ADVERTISEMENT

‘ಬೇರೆಯವರಿಗೆ ಮತ ಹಾಕಿದರೆ ಯಡಿಯೂರಪ್ಪ ಕೆನ್ನೆಗೆ ಹೊಡೆದಂತೆ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 2:13 IST
Last Updated 3 ಡಿಸೆಂಬರ್ 2019, 2:13 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ಹೊಸಪೇಟೆ: ‘ವೀರಶೈವ ಲಿಂಗಾಯತ ಸಮಾಜದವರ ಒಂದು ಮತವೂ ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷದ ಅಭ್ಯರ್ಥಿಗೆ ಬೀಳಬಾರದು. ಒಂದುವೇಳೆ ಬೇರೆಯವರಿಗೆ ಮತ ಹಾಕಿದರೆ ಅದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಕೆನ್ನೆಗೆ ಹೊಡೆದಂತೆ. ಅವರಿಗೆ ಕಲ್ಲು ಹೊಡೆದು ಅಪಮಾನ ಮಾಡಿದಂತೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ವಿಜಯನಗರ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ವೀರಶೈವ–ಲಿಂಗಾಯತ ಸಮುದಾಯದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪನವರು ಬಹಳ ಸಂಕಟ ಅನುಭವಿಸುತ್ತಿದ್ದಾರೆ. ಲಿಂಗಾಯತ ಸಮಾಜದ ಯಾರಿಗೂ ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಈ ರಾಜಕೀಯ ವ್ಯವಸ್ಥೆ ಬಿಟ್ಟಿಲ್ಲ’ ಎಂದರು.

‘ಯಡಿಯೂರಪ್ಪ, ಲಿಂಗಾಯತ ಸಮಾಜದ ಮಾಣಿಕ್ಯವಿದ್ದಂತೆ. ಅದು ಒಂದುಸಲ ಕೆಳಗೆ ಬಿದ್ದರೆ ಮತ್ತೆ ಜೋಡಿಸಲು ಆಗುವುದಿಲ್ಲ. ಸಮಾಜದವರು ಮತ್ತೆ ಮುಖ್ಯಮಂತ್ರಿಯಾಗಲು ಕನಿಷ್ಠ 20 ವರ್ಷ ಬೇಕಾಗುತ್ತದೆ. ಅದಕ್ಕಾಗಿ ಸಮಾಜದವರು ದೊಡ್ಡ ತ್ಯಾಗ ಮಾಡಬೇಕು. ಅನರ್ಹ ಶಾಸಕರ ತ್ಯಾಗದಿಂದ ಯಡಿಯೂರಪ್ಪ ಸಿ.ಎಂ. ಆಗಿದ್ದಾರೆ. ಅವರು ಅದೇ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಸಮಾಜ ಅನರ್ಹರನ್ನು ಗೆಲ್ಲಿಸಬೇಕು’ ಎಂದು ಕೋರಿದರು.

ADVERTISEMENT

‘ವೀರೇಂದ್ರ ಪಾಟೀಲರು 180 ಸೀಟುಗಳನ್ನು ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, ಒಂದು ವರ್ಷಕ್ಕೆ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲಾಯಿತು. ಈಗ ಅಂತಹದ್ದು ಮತ್ತೆ ಆಗಬಾರದು. ನಿಜಲಿಂಗಪ್ಪನವರಿಂದ ಇಲ್ಲಿಯವರೆಗಿನ ಲಿಂಗಾಯತ ನಾಯಕರಿಗೆ ಆದ ಸ್ಥಿತಿ ಯಡಿಯೂರಪ್ಪನವರಿಗೆ ಆಗಬಾರದು. ಯಡಿಯೂರಪ್ಪ ಎಂಬ ಮಗು ಹುಟ್ಟಾಗಿದೆ, ಅದನ್ನು ಮುಂಗುಸಿಯಿಂದ ರಕ್ಷಿಸುವ ಕೆಲಸ ಸಮಾಜದವರು ಮಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.