ADVERTISEMENT

ಅಕ್ಟೋಬರ್‌ 1 ರಿಂದ ಜಾನುವಾರು ಗಣತಿ: ವೆಂಕಟರಾವ್‌ ನಾಡಗೌಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 8:48 IST
Last Updated 28 ಸೆಪ್ಟೆಂಬರ್ 2018, 8:48 IST
   

ರಾಯಚೂರು: ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಜಾನುವಾರು ಗಣತಿಯನ್ನು ಅಕ್ಟೋಬರ್‌ 1 ರಿಂದ ರಾಜ್ಯದಲ್ಲೂ ಆರಂಭಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಗಳು ಮತ್ತು ನಗರಗಳು ಸೇರಿದಂತೆ ರಾಜ್ಯದಲ್ಲಿರುವ 1.5 ಕುಟುಂಬಗಳಿಗೆ ಭೇಟಿ ಕೊಟ್ಟು ಜಾನುವಾರು ಮಾಹಿತಿ ಕಲೆ ಹಾಕಲಾಗುವುದು. ಮೊದಲ ಬಾರಿಗೆ ಟ್ಯಾಬ್ಲೆಟ್‌ ಆಧಾರಿತ ತಂತ್ರಾಂಶ ಬಳಸಿಕೊಂಡು ಗಣತಿ ಮಾಡಲಾಗುತ್ತಿದ್ದು, ಮೂರು ತಿಂಗಳಲ್ಲಿ ಗಣತಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ನಾಯಿ, ಹಂದಿಗಳು ಸೇರಿದಂತೆ ನಾಡಿನ ಎಲ್ಲ ಪ್ರಾಣಿಗಳನ್ನು ಲೆಕ್ಕಹಾಕಲಾಗುವುದು. ಕುಕ್ಕುಟ ವಿಭಾಗದಲ್ಲಿ ಕೋಳಿಗಳು, ಬಾತುಕೋಳಿಗಳು, ಎಮು ಹಾಗೂ ಪಕ್ಷಿಗಳ ಮಾಹಿತಿಯನ್ನು ಕಲೆ ಹಾಕಲಾಗುವುದು. ಪಶು ಸಂಗೋಪನೆಯಲ್ಲಿ ಬಳಕೆಯಾಗುತ್ತಿರುವ ಯಂತ್ರೋಪಕರಣಗಳು ಬಗ್ಗೆಯೂ ತಿಳಿದುಕೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಜಾನುವಾರು ಗಣತಿಯನ್ನು ಮೊದಲ ಬಾರಿ ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಪಡೆಯರು 1897 ರಲ್ಲಿ ಆರಂಭಿಸಿದರು. ಆನಂತರ ಐದು ವರ್ಷಗಳಿಗೊಮ್ಮೆ ರಾಜ್ಯದಲ್ಲಿ ನಡೆಸಿದ ಗಣತಿಯು ದೇಶವ್ಯಾಪಿ ಜಾನುವಾರು ಗಣತಿ ಆರಂಭಿಸುವುದಕ್ಕೆ ಪ್ರೇರಣೆಯಾಯಿತು ಎಂದು ತಿಳಿಸಿದರು.

ದೇಶದಲ್ಲಿ ನಡೆದ ರೈತರ ಆತ್ಮಹತ್ಯೆಗಳ ಕುರಿತ ಸಮೀಕ್ಷಾ ವರದಿ ಪ್ರಕಾರ, ಉದ್ಯಮ ಆಧಾರಿತ ಚಟುವಟಿಕೆ ಅಥವಾ ಬರೀ ಕೃಷಿ ಮಾಡಿಕೊಂಡಿದ್ದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಶು ಸಾಕಾಣಿಕೆ ಮತ್ತು ಸಮಗ್ರ ಕೃಷಿ ಅಳವಡಿಸಿಕೊಂಡಿರುವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಈಗ ನಡೆಸುವ 20ನೇ ರಾಷ್ಟ್ರೀಯ ಜಾನುವಾರು ಗಣತಿಯಿಂದ ದೊರೆಯುವ ಅಂಕಿ ಅಂಶ ಆಧರಿಸಿ ರೈತರಿಗಾಗಿ ಹೊಸ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ನೆರವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.