ADVERTISEMENT

ಸ್ಥಳೀಯ ಸಂಸ್ಥೆಗಳ ಉಪಚುನಾವಣೆ; ಕಾಂಗ್ರೆಸ್, ಬಿಜೆಪಿಗೆ ತಲಾ ಎರಡು ಸ್ಥಾನ

​ಪ್ರಜಾವಾಣಿ ವಾರ್ತೆ
Published 22 ಮೇ 2022, 18:57 IST
Last Updated 22 ಮೇ 2022, 18:57 IST

ಬೆಂಗಳೂರು: ದಾವಣಗೆರೆ ಮಹಾನಗರಪಾಲಿಕೆಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್‌ ಬಿಟ್ಟು ಪಕ್ಷಾಂತರ ಮಾಡಿದ್ದ ಬಿಜೆಪಿ ಅಭ್ಯರ್ಥಿಗಳ ಪಾಲಾಗಿವೆ. ಶಿರಾ ಹಾಗೂ ಬಸವಕಲ್ಯಾಣ ನಗರಸಭೆಯ ತಲಾ ಒಂದು ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ದಾವಣಗೆರೆ ಮಹಾನಗರಪಾಲಿಕೆಯ 28ನೇ ವಾರ್ಡ್ ಸದಸ್ಯ ಜೆ.ಎನ್. ಶ್ರೀನಿವಾಸ್, 37ನೇ ವಾರ್ಡ್ ಸದಸ್ಯೆ ಶ್ವೇತಾ ಎಸ್. ದಂಪತಿ ಕಾಂಗ್ರೆಸ್‌ಗೆರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ಉಪಚುನಾವಣೆ ನಡೆದಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ದಂಪತಿ ಗೆದ್ದಿದ್ದಾರೆ.

28ನೇ ವಾರ್ಡ್‌ನಲ್ಲಿ ಜೆ.ಎನ್. ಶ್ರಿನಿವಾಸ್ 2,565 ಮತ ಗಳಿಸಿದರೆ, ಕಾಂಗ್ರೆಸ್‌ನ ಹುಲ್ಲುಮನಿ ಗಣೇಶ್ 1,884 ಮತ ಪಡೆದರು. 37ನೇ ವಾರ್ಡ್ ನಲ್ಲಿ ಶ್ವೇತಾ 2,096 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ ಕೆ.ಎಸ್‌. 1,303 ಮತ ಪಡೆದರು.

ADVERTISEMENT

ಶಿರಾ ನಗರಸಭೆಯ 21ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರ್ಷಾದ್ ಪಾಷ ಅವರು 129 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇರ್ಷಾದ್ ಪಾಷ 618 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಎಚ್.ವಾಸಿಲ್ ಅಹಮದ್ (ಜೆಡಿಎಸ್) 489 ಮತ ಪಡೆದರು.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ನಗರಸಭೆಯ 25ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪವನ ಗಾಯಕವಾಡ 843 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪವನ ಗಾಯಕವಾಡ 1075 ಮತ ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮನೋಜ ದಾದೆಗೆ 232 ಮತ ಪಡೆದರು.

ಜೇವರ್ಗಿ ಪುರಸಭೆ ಉಪಚುನಾವಣೆ– ಕಾಂಗ್ರೆಸ್‌ಗೆ ಗೆಲುವು: ಕಲಬುರಗಿ ಜಿಲ್ಲೆಯ ಜೇವರ್ಗಿ ಪುರಸಭೆಯ 10ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾಕೀರಾ ಬೇಗಂ ಮಹಮ್ಮದ್ ಸಲೀಮ್ 5 ಮತಗಳಿಂದ ವಿಜೇತರಾದರು. ಶಾಕೀರಾಬೇಗಂ 209 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ಹುಸೇನಬಿ ಮಹಮ್ಮದ್ ಇಸ್ಮಾಯಿಲ್ ಸಾಬ್ ಪಾನವಾಲೆ 204 ಮತಗಳು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.