ADVERTISEMENT

ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಒಂಟಿಯಾಗಿ ಬಂದು ತಾಯಿಯ ಸೇರಿದ 5 ವರ್ಷದ ಬಾಲಕ

ಏಜೆನ್ಸೀಸ್
Published 25 ಮೇ 2020, 14:32 IST
Last Updated 25 ಮೇ 2020, 14:32 IST
ವಿಹಾನ್ ಶರ್ಮಾ
ವಿಹಾನ್ ಶರ್ಮಾ   

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳಿನಿಂದ ದೆಹಲಿಯಲ್ಲಿಯೇ ಸಿಲುಕಿದ್ದ 5 ವರ್ಷದ ಬಾಲಕನೊಬ್ಬ ದೆಹಲಿಯಿಂದ ವಿಮಾನದಲ್ಲಿ ಒಂಟಿಯಾಗಿ ಪ್ರಯಾಣಿಸಿ ಸೋಮವಾರ ಬೆಂಗಳೂರು ತಲುಪಿದ್ದಾನೆ.

ದೇಶದಲ್ಲಿ ಕೊರೊನಾವೈರಸ್‌ ಸೋಂಕು ಹರಡುವುದನ್ನು ತಡೆಯಲು ವಿಮಾನ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಆದರೆ, ಮೂರು ತಿಂಗಳ ಹಿಂದೆ ದೆಹಲಿಗೆ ತೆರಳಿದ್ದ ಐದು ವರ್ಷದ ವಿಹಾನ್ ಶರ್ಮಾ ಅಲ್ಲೇ ಉಳಿದುಕೊಳ್ಳಬೇಕಾಗಿತ್ತು.

ಇದೀಗ ಲಾಕ್‌ಡೌನ್‌ ಸಡಿಲಿಸಿ ದೇಶೀಯ ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ವಿಹಾನ್ ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿದ್ದು, ತನ್ನ ತಾಯಿಯನ್ನು ಸೇರಿಕೊಂಡಿದ್ದಾನೆ.

ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗನನ್ನು ಬರಮಾಡಿಕೊಂಡ ವಿಹಾನ್‌ ತಾಯಿ, ‘ನನ್ನ ಮಗ 5 ವರ್ಷದ ವಿಹಾನ್‌, ದೆಹಲಿಯಿಂದ ಬೆಂಗಳೂರಿಗೆ ಒಂಟಿಯಾಗಿ ಆಗಮಿಸಿದ್ದಾನೆ. ಆತ ಮೂರು ತಿಂಗಳ ನಂತರ ಬೆಂಗಳೂರಿಗೆ ಬಂದಿದ್ದಾನೆ’ ಎಂದು ಹೇಳಿದ್ದಾರೆ.

ವಿಮಾನಕಾರ್ಯಾಚರಣೆ ಮತ್ತೆ ಆರಂಭಗೊಳ್ಳುತ್ತಿದ್ದಂತೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸುಮಾರು 60 ವಿಮಾನಗಳ ಸಂಚಾರ ಆರಂಭಿಸಿವೆ ಮತ್ತು ಬೆಂಗಳೂರಿನತ್ತ 54 ವಿಮಾನಗಳು ಆಗಮಿಸಲಿವೆ.

ದೇಶದಲ್ಲಿ ಕೋವಿಡ್‌–19 ಸೋಂಕಿನಿಂದಾಗಿ ಇದುವರೆಗೆ 4,021 ಜನರು ಸಾವನ್ನಪ್ಪಿದ್ದಾರೆ. 57,720 ಸೋಂಕಿತರು ಗುಣಮುಖರಾಗಿದ್ದು, ಇನ್ನೂ 77,103 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.