ADVERTISEMENT

ಕೋವಿಡ್–19 | ಮತ್ತೆ ಮೂರು ಜಿಲ್ಲೆಗಳು ಲಾಕ್‌ಡೌನ್‌

ಲಾಕ್‌ಡೌನ್‌ ವ್ಯಾಪ್ತಿಗೆ ದಕ್ಷಿಣಕನ್ನಡ, ಧಾರವಾಡ, ಕಲಬುರ್ಗಿ ಸೇರ್ಪಡೆ ‌l ಶಿವಮೊಗ್ಗ ಭಾಗಶಃ ನಿರ್ಬಂಧದ ವ್ಯಾಪ್ತಿಗೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 20:59 IST
Last Updated 13 ಜುಲೈ 2020, 20:59 IST
ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಜನರು ತಮ್ಮ ಊರುಗಳಿಗೆ ತೆರಳುತ್ತಿರುವ ದೃಶ್ಯ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ಸೋಮವಾರ ಕಂಡು ಬಂತು -ಪ್ರಜಾವಾಣಿ ಚಿತ್ರಗಳು/ ರಂಜು ಪಿ.
ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಜನರು ತಮ್ಮ ಊರುಗಳಿಗೆ ತೆರಳುತ್ತಿರುವ ದೃಶ್ಯ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ಸೋಮವಾರ ಕಂಡು ಬಂತು -ಪ್ರಜಾವಾಣಿ ಚಿತ್ರಗಳು/ ರಂಜು ಪಿ.   

ಬೆಂಗಳೂರು: ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಘೋಷಿಸಲಾಗಿರುವ ಲಾಕ್‌ಡೌನ್ ಮತ್ತೆ ಮೂರು ಜಿಲ್ಲೆಗಳಿಗೆ ವಿಸ್ತರಿಸಿದೆ.

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ವಿಡಿಯೊ ಸಂವಾದ ನಡೆಸಿದರು. ಬಳಿಕ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಈ ನಿರ್ಧಾರ ಪ್ರಕಟಿಸಿದರು.ಉಳಿದ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೇ ಅಧಿಕಾರ ನೀಡಲಾಗಿದೆ.

ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಗದೀಶ ಶೆಟ್ಟರ್‌ ಪ್ರಕಟಿಸಿದರು. ಶಿವಮೊಗ್ಗ ಜಿಲ್ಲೆಯನ್ನು ಭಾಗಶಃ ಲಾಕ್‌ಡೌನ್‌ ಮಾಡಲಿದ್ದು, ದಿನಾಂಕವನ್ನು ಮಂಗಳವಾರ ನಿರ್ಧರಿಸಲಾಗುತ್ತದೆ.

ADVERTISEMENT

ಕಲಬುರ್ಗಿ ನಗರ ಮತ್ತು ಜಿಲ್ಲೆಯ ಎಲ್ಲ ತಾಲ್ಲೂಕುಗಳ ನಗರ– ಸ್ಥಳೀಯ ಸಂಸ್ಥೆಗಳ ಪ್ರದೇಶಕ್ಕೆ ಸೀಮಿತವಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ.

‘ಕೋವಿಡ್‌ ಪ್ರಕರಣಗಳು ಹೆಚ್ಚು ಇರುವ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಬಗ್ಗೆ ಆಯಾ ಜಿಲ್ಲಾಡಳಿತಗಳು ಉಸ್ತುವಾರಿ ಸಚಿವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬಹುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಲಾಕ್‌ಡೌನ್‌ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ‘ಮಹಾರಾಷ್ಟ್ರ ಗಡಿ ಬಂದ್‌ ಮಾಡಿದರೆ ಸಾಕು, ಲಾಕ್‌ಡೌನ್‌ ಅಗತ್ಯವಿಲ್ಲ’ ಎಂದು ಬೆಳಗಾವಿ ಜಿಲ್ಲಾಧಿಕಾರಿ ಹೇಳಿದರು.

ಲಾಕ್‌ಡೌನ್‌ ಮಾರ್ಗಸೂಚಿ
ಮಂಗಳವಾರ ರಾತ್ರಿ 8 ರಿಂದ ಜು.22 ರ ಬೆಳಿಗ್ಗೆ 5 ಗಂಟೆಯವರೆಗೆ ಒಟ್ಟು 7 ದಿನಗಳ ಲಾಕ್‌ಡೌನ್‌ ಘೋಷಿಸಿದ್ದು, ಅದರ ಮಾರ್ಗಸೂಚಿ ಈ ರೀತಿ ಇದೆ–

ಏನು ಇರಲಿದೆ (ಕಂಟೇನ್‌ಮೆಂಟ್ ವಲಯ ಬಿಟ್ಟು):
* ಆಸ್ಪತ್ರೆ, ಹಾಲು, ಹಣ್ಣು– ತರಕಾರಿ, ದಿನಸಿ ಪದಾರ್ಥಗಳು, ನೀರು, ನೈರ್ಮಲ್ಯ ಸೇವೆಗಳು
* ಬಿಬಿಎಂಪಿ ಕಚೇರಿ ಮತ್ತು ಅಧೀನ ಕಚೇರಿಗಳು, ಪೊಲೀಸ್‌, ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆ, ಗೃಹ ರಕ್ಷಕ ದಳ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಗಳು
* ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಕಚೇರಿಗಳು (ಶೇ 50 ರಷ್ಟು ಸಿಬ್ಬಂದಿ ಬಳಸಿಕೊಳ್ಳುವುದು)
* ನ್ಯಾಯಾಲಯಗಳು, ನ್ಯಾಯಾಂಗಕ್ಕೆ ಸಂಬಂಧಿಸಿದ ಕಚೇರಿಗಳು
* ರಾಜ್ಯ ಹುಜೂರ್‌ ಖಜಾನೆ, ಅಧೀನ ಜಿಲ್ಲಾ ಖಜಾನೆಗಳು
* ಅಂಚೆ ಕಚೇರಿ, ಬ್ಯಾಂಕ್‌ಗಳು ಮತ್ತು ರಿಸರ್ವ್‌ ಬ್ಯಾಂಕ್‌
* ಆಸ್ಪತ್ರೆ, ನರ್ಸಿಂಗ್‌ ಹೋಂ, ಕ್ಲಿನಿಕ್‌, ಲ್ಯಾಬ್‌
* ಔಷಧ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕಾ ಘಟಕಗಳು
* ಎಲ್ಲ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳು
* ಮಕ್ಕಳು, ಅಂಗವಿಕಲರು, ಮಾನಸಿಕ ಅಸ್ವಸ್ಥರು, ಹಿರಿಯ ನಾಗರಿಕರ ಆರೈಕೆ ಸಂಸ್ಥೆಗಳು
* ಟ್ರಕ್‌ಗಳು, ಸರಕು ವಾಹನಗಳ ಸಂಚಾರ

ಏನೇನಿಲ್ಲ:
* ಆಟೋರಿಕ್ಷಾ,ಟ್ಯಾಕ್ಸಿ, ಕ್ಯಾಬ್, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್ಸುಗಳು(ತುರ್ತು ಸಂದರ್ಭಗಳಲ್ಲಿ ಬಳಸುವುದನ್ನು ಹೊರತುಪಡಿಸಿ)
* ಶೈಕ್ಷಣಿಕ ಸಂಸ್ಥೆಗಳು, ಶಾಲೆ, ಕಾಲೇಜು, ತರಬೇತಿ, ಕೋಚಿಂಗ್‌ ಸೆಂಟರ್‌ಗಳು
* ಹೊಟೇಲ್‌, ರೆಸ್ಟೋರೆಂಟ್‌ (ಪಾರ್ಸೆಲ್‌ ಒಯ್ಯಲು ಅವಕಾಶ)
* ಸಿನಿಮಾ ಮಂದಿರ, ಶಾಪಿಂಗ್‌ ಮಾಲ್, ಜಿಮ್ನಾಷಿಯಂ, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂ, ಮನರಂಜನಾ ಉದ್ಯಾನಗಳು
* ಬಾರ್‌ಗಳು

ವಿಸ್ತರಣೆ ಇಲ್ಲ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಧಿಸಲಾಗಿರುವ ಒಂದು ವಾರದ ಲಾಕ್‌ಡೌನ್‌ ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಈ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಧಿಸಲಾಗಿದ್ದು, ಒಂದು ವಾರದೊಳಗೆ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ತಿಳಿಸಿದ್ದಾರೆ.

ಯಾವ ಜಿಲ್ಲೆಗಳಲ್ಲಿಎಂದಿನಿಂದ
ದಕ್ಷಿಣ ಕನ್ನಡ ಜಿಲ್ಲೆ ಜು.16 ರಿಂದ
ಧಾರವಾಡ ಜಿಲ್ಲೆ ಜು.15 ರಿಂದ
ಕಲಬುರ್ಗಿ ಜಿಲ್ಲೆ ಜು.14 ರಿಂದ
(ಶಿವಮೊಗ್ಗ, ಉಡುಪಿ, ಬೀದರ್‌ ಜಿಲ್ಲೆಗಳು ಮಂಗಳವಾರ ನಿರ್ಣಯ ತೆಗೆದುಕೊಳ್ಳಲಿವೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.