ADVERTISEMENT

ಅರ್ಧದಷ್ಟು ಮಂದಿಗೂ ಸಿಕ್ಕಿಲ್ಲ ಪರಿಹಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 20:05 IST
Last Updated 21 ಜುಲೈ 2020, 20:05 IST

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ₹5 ಸಾವಿರ ನೆರವು ಎರಡು ತಿಂಗಳಾದರೂ ಅರ್ಧದಷ್ಟು ಮಂದಿಗೂ ಸಿಕ್ಕಿಲ್ಲ. ನೆರವು ಕೋರಿ ಬಂದಿರುವ 2.46 ಲಕ್ಷ ಅರ್ಜಿಗಳ ಪೈಕಿ ಇದುವರೆಗೆ 1.20 ಲಕ್ಷ ಮಂದಿಗಷ್ಟೇ ಹಣ ಪಾವತಿಯಾಗಿದೆ.

ಮುಖ್ಯಮಂತ್ರಿ ಅವರು, ಮೇ ತಿಂಗಳ ಮೊದಲ ವಾರದಲ್ಲಿ ಚಾಲಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ರಾಜ್ಯದಾದ್ಯಂತ ಸುಮಾರು 7.75 ಲಕ್ಷ ಆಟೊ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು.

16 ಸಾವಿರ ಬಾಕಿ‌: ‘ಚಾಲಕರ ಬ್ಯಾಂಕ್‌ ಖಾತೆಗೆ ತಲಾ ₹5 ಸಾವಿರದಂತೆ ಇದುವರೆಗೆ ₹60 ಕೋಟಿ ಪಾವತಿಸಲಾಗಿದೆ. ಒಟ್ಟು ಅರ್ಜಿಗಳ ಪೈಕಿ, ವಿವಿಧ ಕಾರಣಗಳಿಗಾಗಿ 16 ಸಾವಿರ ಬಾಕಿ ಇವೆ. ಉಳಿದ 1.10 ಲಕ್ಷ ಅರ್ಜಿಗಳು ಪಾವತಿಯಾಗುವ ಪ್ರಕ್ರಿಯೆಯಲ್ಲಿವೆ’ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್. ಹೇಮಂತ ಕುಮಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

‘ಆಟೊವನ್ನು ಬಾಡಿಗೆಗೆ ಪಡೆದು ಚಾಲನೆ ಮಾಡುವವರು ಅನೇಕರಿದ್ದಾರೆ. ಪರವಾನಗಿ ಮತ್ತು ಬ್ಯಾಡ್ಜ್‌ ಹೊಂದದವರ ಸಂಖ್ಯೆಯೂ ಹೆಚ್ಚಾಗಿದೆ. ಇವರು ಪರಿಹಾರದ ವ್ಯಾಪ್ತಿಗೆ ಬರುವುದಿಲ್ಲ. ಅರ್ಜಿ ಸಲ್ಲಿಕೆಗೆ ಜುಲೈ 31ರವರೆಗೆ ಅವಕಾಶವಿದೆ’ ಎಂದರು.

ಕಠಿಣ ಷರತ್ತುಗಳು: ‘ಬಹುತೇಕ ಆಟೊ ಮತ್ತು ಟ್ಯಾಕ್ಸಿ ಚಾಲಕರ ಬಳಿ ನಿಯಮಾನುಸಾರ ಇರಬೇಕಾದ ದಾಖಲೆಗಳಿಲ್ಲ. ಹಾಗಾಗಿ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಅವರು ಪೂರೈಸಲು ಸಾಧ್ಯವಾಗಿಲ್ಲ. ಪರಿಹಾರ ಪಡೆಯಲು ಚಾಲಕರು 2020ರ ಮಾರ್ಚ್‌ 24
ರೊಳಗೆ ಚಾಲನಾ ಪರವಾನಗಿ ಹಾಗೂ ಬ್ಯಾಡ್ಜ್‌ ಹೊಂದಿರಬೇಕು. ವಾಹನದ ಸುಸ್ಥಿತಿ (ಫಿಟ್‌ನೆಸ್‌) ಪ್ರಮಾಣ ಪತ್ರ ಇರಬೇಕು. ಹಳದಿ ಬೋರ್ಡ್‌ನ ಸ್ವಂತ ಆಟೊ ಅಥವಾ ಟ್ಯಾಕ್ಸಿ ಹೊಂದಿರಬೇಕು’ ಎಂದು ಹುಬ್ಬಳ್ಳಿ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತವಾಡಮಠತಿಳಿಸಿದರು.

***

ಆಟೊ ಚಾಲನೆ ಮಾಡುವ ಎಲ್ಲರಿಗೂ ಪರಿಹಾರ ಸಿಗಬೇಕು. ಆಗ ಮಾತ್ರ ಸರ್ಕಾರ ಘೋಷಿಸಿರುವ ಈ ಪರಿಹಾರ ಪ್ಯಾಕೇಜ್‌ ನಿಜವಾದ ಫಲಾನುಭವಿಗಳನ್ನು ತಲುಪುತ್ತದೆ

- ಶೇಖರಯ್ಯ ಮಠಪತಿ, ಅಧ್ಯಕ್ಷ, ಉತ್ತರ ಕರ್ನಾಟಕ ಆಟೊ ಚಾಲಕರ ಒಕ್ಕೂಟ

ಕಠಿಣ ಷರತ್ತುಗಳಿಂದ ಬಹುತೇಕ ಆಟೊ ಮತ್ತು ಟ್ಯಾಕ್ಸಿ ಚಾಲಕರು ಪರಿಹಾರದಿಂದ ವಂಚಿತರಾಗಿದ್ದಾರೆ. ಬಾಡಿಗೆ ಆಧಾರದ ಮೇಲೆ ವಾಹನ ಓಡಿಸುತ್ತಿದ್ದರೂ ಪರಿಹಾರ ನೀಡಬೇಕು

- ಕೆ. ಸೋಮಶೇಖರ್, ಅಧ್ಯಕ್ಷ, ನಮ್ಮ ಚಾಲಕರ ಟ್ರೇಡ್ ಯೂನಿಯನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.