ADVERTISEMENT

ಲಾಕ್‌ಡೌನ್ ಉಲ್ಲಂಘನೆ: ರಾವೂರು ರಥೋತ್ಸವ ಪ್ರಕರಣ ಸಂಬಂಧ ಮತ್ತೆ 8 ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 8:57 IST
Last Updated 18 ಏಪ್ರಿಲ್ 2020, 8:57 IST
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನಸಮೂಹ
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನಸಮೂಹ   

ಕಲಬುರ್ಗಿ: ಚಿತ್ತಾಪರ ತಾಲ್ಲೂಕಿನ ರಾವೂರು ಗ್ರಾಮದಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿ ರಥೋತ್ಸವ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರನ್ನು ಬಂಧಿಸಿದ್ದ ಪೊಲೀಸರು, ಶನಿವಾರ ಮತ್ತೆ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸುಮಾರು 200ಕ್ಕೂ ಹೆಚ್ಚು ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಬಹುಪಾಲು ಜನ ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ರಾವೂರಿನ ಐತಿಹಾಸಿಕ ಸಿದ್ಧಲಿಂಗೇಶ್ವರ ಮಠದ ಟ್ರಸ್ಟ್ ವತಿಯಿಂದ ಜಾತ್ರೆ ಹಾಗೂ ಪಲ್ಲಕ್ಕಿ ಮಹೋತ್ಸವ ನಡೆಸಲಾಗಿತ್ತು. ಗ್ರಾಮದ ನೂರಾರು ಜನ ಗುಂಪು ಗುಂಪಾಗಿ ಸೇರಿ ರಥ ಎಳೆದಿದ್ದರು.

ADVERTISEMENT

ಮಠದ ಟ್ರಸ್ಟ್‌ನವರೂ ಸೇರಿದಂತೆ 200ಕ್ಕೂ ಹೆಚ್ಚ ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಗರುವಾರ ಸಂಜೆ ವೇಳೆಗೆ ಎಲ್ಲ ಆರೋಪಿಗಳೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ಲಾಕ್ಡೌನ್ ಆಗಿದ್ದರಿಂದ ಆರೋಪಿಗಳು ಗ್ರಾಮ ಬಿಟ್ಟು ಬೇರೆಲ್ಲೂ ಓಡಿ ಹಗಲು ಸಾಧ್ಯವಿಲ್ಲ. ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

19 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವಈ ಗ್ರಾಮವನ್ನು ಈಗ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಕೇವಲ 2 ಕಿ.ಮೀ ಅಂತರದಲ್ಲಿರುವ ವಾಡಿ ಪಟ್ಟಣದಲ್ಲಿ ಈಗಾಗಲೇ ಎರಡು ವರ್ಷದ ಮಗುವಿಗೆ ಕೋವಿಡ್ ಸೋಂಕು ತಗುಲಿದೆ. ಮಾತ್ರವಲ್ಲ, ಮಗುವಿಗೆ ಚಿಕಿತ್ಸೆ ನೀಡಿದ 23 ವರ್ಷದ ಹೌಸ್ ಸರ್ಜನ್ ಒಬ್ಬರಿಗೆ ಕೂಡ ಸೋಂಕು ಅಂಟಿಕೊಂಡಿದೆ.

ಹೀಗಾಗಿ ಜಾತ್ರೆಯಲ್ಲಿ ಅಪಾರ ಜನ ಸೇರಿದ್ದು ಆತಂಕಕ್ಕೆ ಕಾರಣವಾಗಿದೆ.

'ನಂಜನಗೂಡಿನ ಜುಬೀಲಿಂಟ್ ಕಾರ್ಖಾನೆಹಾಗೂ ದೆಹಲಿಯ ತಬ್ಲಿಗಿ ಜಮಾತ್ ರೀತಿ ರಾವೂರಿನಲ್ಲೂ ಕೊರೊನ ಅಟ್ಟಹಾಸ ಮೆರೆಯುವುದೇ?' ಎಂಬ ಆತಂಕದ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.