ADVERTISEMENT

ಲೋಕಸಭಾ ಚುನಾವಣೆ: 28 ಕ್ಷೇತ್ರಗಳಲ್ಲೂ ನಟ ಉಪೇಂದ್ರ ನೇತೃತ್ವದ ಪಕ್ಷ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 11:04 IST
Last Updated 26 ಜನವರಿ 2019, 11:04 IST
ಉಪೇಂದ್ರ
ಉಪೇಂದ್ರ   

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಉತ್ತಮ ಪ್ರಜಾಕೀಯ ಪಕ್ಷದ(ಯು‍ಪಿಪಿ) ರಾಜ್ಯ ಘಟಕದ ಅಧ್ಯಕ್ಷ ಹಾಗೂ ನಟ ಉಪೇಂದ್ರ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ‘ನಮಗೇನೂ ಗೊತ್ತಿಲ್ಲ. ನಾವೇನೂ ಹೇಳಿಲ್ಲ. ನೀವು ಹೇಳುವುದನ್ನು ಬಿಟ್ಟು’ ಎಂಬ ಧ್ಯೇಯ ವಾಕ್ಯದೊಂದಿಗೆ ಪಕ್ಷ ಚುನಾವಣೆಗೆ ಹೋಗಲಿದೆ. ಜನರ ಸಮಸ್ಯೆಗಳನ್ನು ಆಲಿಸುವವರನ್ನು ಪಕ್ಷದಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ. ಪ್ರಕಾಶ್‌ ರೈ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ’ ಎಂದು ಹೇಳಿದರು.

‘ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಪ್ರಣಾಳಿಕೆಗಳಲ್ಲಿ ಆಶ್ವಾಸನೆ ನೀಡುತ್ತವೆ. ಅದು ತಪ್ಪು. ಜನರ ಬೇಕು–ಬೇಡಿಕೆಗಳನ್ನು ಅವರಿಂದಲೇ ತಿಳಿದುಕೊಳ್ಳಬೇಕು. ಆದ್ದರಿಂದ ಸೆಲೆಕ್ಷನ್, ಎಲೆಕ್ಷನ್, ಕಲೆಕ್ಷನ್, ರಿಜೆಕ್ಷನ್ ಮತ್ತು ಪ್ರಮೋಷನ್‌ ಎಂಬುವ ಐದು ತತ್ವಗಳ ಮೇಲೆ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ’ ಎಂದರು.

ADVERTISEMENT

‘ಬೇರೆ ಪಕ್ಷಗಳ ಬಗ್ಗೆ ನಾವು ಮಾತನಾಡಲ್ಲ. ಯಾರ ಬಳಿ ವಿಷಯಗಳಿರುವುದಿಲ್ಲವೋ ಅವರು ಮಾತ್ರ ಬೇರೆಯವರ ಬಗ್ಗೆ ಮಾತನಾಡುತ್ತಾರೆ. ನಾವು ಮೊದಲು ಕೆಲಸ ಮಾಡಬೇಕು. ಅದರ ಕುರಿತು ಮಾತ್ರ ಮಾತನಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನೂಉಪೇಂದ್ರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.