ಬಂಧನ
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸಲೂನ್ ಒಂದಕ್ಕೆ ಪರವಾನಗಿ ನೀಡುವ ಸಂಬಂಧ ₹40,000 ಲಂಚ ಪಡೆಯುವಾಗ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿ ನಿರ್ಮಲಾ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಆಡುಗೋಡಿ ನಿವಾಸಿ ಎಂ.ಕೆ.ಸುಬ್ರಹ್ಮಣ್ಯ ಅವರು ಇಂದಿರಾನಗರದಲ್ಲಿ ಸಲೂನ್ ಆರಂಭಿಸುತ್ತಿದ್ದು, ಅದಕ್ಕೆ ಅಗತ್ಯವಿದ್ದ ಪರವಾನಗಿ ಪಡೆಯಬೇಕಿತ್ತು. ಈ ಸಂಬಂಧ ಬಿಬಿಎಂಪಿ ದೊಮ್ಮಲೂರು ಉಪವಿಭಾಗದ ಆರೋಗ್ಯ ನಿರೀಕ್ಷಕಿ ನಿರ್ಮಲಾ ಅವರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ ₹40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸುಬ್ರಹ್ಮಣ್ಯ ಅವರು ನೀಡಿದ್ದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ಅವರು ಶನಿವಾರ ನಿರ್ಮಲಾ ಅವರ ಕಚೇರಿಗೆ ತೆರಳಿ ಲಂಚ ನೀಡಿದ್ದರು. ಆಗಲೇ ದಾಳಿ ನಡೆಸಿ ಅವರನ್ನು ಬಂಧಿಸಲಾಯಿತು. ನಗದು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.