ADVERTISEMENT

ಮರುಎಣಿಕೆಯಲ್ಲಿ ಕಡಿಮೆ ಅಂಕ: ತಪ್ಪಿತಸ್ಥರ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:55 IST
Last Updated 25 ಜನವರಿ 2021, 16:55 IST
ಸಚಿವ ಎಸ್‌. ಸುರೇಶ್‌ ಕುಮಾರ್‌
ಸಚಿವ ಎಸ್‌. ಸುರೇಶ್‌ ಕುಮಾರ್‌    

ಬೆಂಗಳೂರು: ದ್ವಿತೀಯ ಪಿಯು ಉತ್ತರ ಪತ್ರಿಕೆಯ ಅಂಕಗಳ ಮರುಎಣಿಕೆ ಯಲ್ಲಿ ಹೊಸನಗರ ತಾಲ್ಲೂಕಿನ ಹನಿಯಾ ಗ್ರಾಮದ ವಿದ್ಯಾರ್ಥಿನಿ ಎಚ್.ಆರ್. ಧರಣಿಗೆ ಕಡಿಮೆ ಅಂಕ ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಈ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಪಿಯು ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ 99 ಅಂಕ ಬಂದಾಗ ತನಗೆ 100 ಅಂಕ ಬರಬೇಕಿತ್ತೆಂದು ಉತ್ತರಪತ್ರಿಕೆ ಛಾಯಾ ಪತ್ರಿಕೆಯನ್ನು ತರಿಸಿ ಧರಣಿ ನೋಡಿದ್ದಳು. ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿ ಒಂದು ಅಂಕ ಕಡಿಮೆ ಬಂದಿದ್ದು ಗೊತ್ತಾಗಿ ಮರುಎಣಿಕೆಗೆ ಅರ್ಜಿ ಸಲ್ಲಿಸಿದ್ದಳು ಆದರೆ, ಮರುಎಣಿಕೆಯಲ್ಲಿ 88 ಅಂಕಗಳು ಬಂದಿದ್ದವು.

ಈ ಬಗ್ಗೆ ವಿದ್ಯಾರ್ಥಿನಿ ಹೈಕೋರ್ಟ್ ಮೊರೆ ಹೋಗಿದ್ದಳು. ಹೈಕೋರ್ಟ್ ಮರುಎಣಿಕೆಗೆ ಆದೇಶಿಸಿದ್ದು, ಆಗ 100 ಅಂಕಗಳು ಬಂದಿದೆ. ಮರು ಎಣಿಕೆಯಲ್ಲಿ ಲೋಪ ಎಸಗಿದ ಅಧಿಕಾರಿ, ಉಪನ್ಯಾಸಕರು ಮತ್ತು ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಿಸಿದವರ ವಿವರಗಳೊಂದಿಗೆ ಎರಡು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಚಿವರು ಸೂಚಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿನಿಗೆ ನ್ಯಾಯ ಸಿಕ್ಕಿರುವುದು ಸಂತಸ ಸಂಗತಿ. ಆದರೆ, ಅಧಿಕಾರಿಗಳ ಕರ್ತವ್ಯ ಚ್ಯುತಿಯಿಂದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿದೆ. ವ್ಯವಸ್ಥೆಯ ಬಗ್ಗೆಯೇ ಭರವಸೆ ಕಳೆದುಕೊಳ್ಳು
ವಂತಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯ ನೆರವಿಗೆ ಬರಬೇಕಾದ ಇಲಾಖೆ, ಆಕೆಯ ಆತ್ಮವಿಶ್ವಾಸ ಕಸಿಯುವ ಕೆಲಸ ಮಾಡಿದೆ. ಇದಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಹೀಗಾಗಿ, ತಕ್ಷಣವೇ ಈ ಕುರಿತು ವರದಿ ಸಲ್ಲಿಸಿ’ ಎಂದು ತಮ್ಮ ಟಿಪ್ಪಣಿಯಲ್ಲಿ ಸಚಿವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.