ಧಾರವಾಡ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದು, ಬಂಧಿತ ಗಣೇಶ ಮಿಸ್ಕಿನ್ ಎಂದು ಕಲುಬರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ ಗುರುತಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ಧಾರವಾಡ ತಹಶೀಲ್ದಾರ್ ಸಮ್ಮುಖದಲ್ಲಿ ಬುಧವಾರ ನಡೆದ ಗುರುತು ಹಿಡಿಯುವ ಪರೇಡ್ನಲ್ಲಿ ಹತ್ತು ಜನರನ್ನು ನಿಲ್ಲಿಸಲಾಗಿತ್ತು. ಘಟನೆಯ ಪ್ರತ್ಯಕ್ಷದರ್ಶಿಗಳಾದಉಮಾದೇವಿ ಕಲಬುರ್ಗಿ ಹಾಗೂ ಅವರ ಮನೆ ಸಮೀಪ ಕಟ್ಟಡ ಕಾಮಗಾರಿಯ ಮೇಲ್ವಿಚಾರಕ ಪೀರ್ಬಾಷಾ ನಜೀರ್ಸಾಬ್ಗೆ ಹಂತಕರ ಗುರುತು ಪತ್ತೆಗೆ ಅವಕಾಶ ಕಲ್ಪಿಸಲಾಗಿತ್ತು.
ಗಣೇಶ ಮಿಸ್ಕಿನ್ ಎಂಬಾತನೇ ಡಾ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದು ಎಂಬ ಅವರಿಬ್ಬರ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. 2015ರ ಆ.30ರಂದುಕಲಬುರ್ಗಿ ಅವರನ್ನು ಗುಂಡಿಕ್ಕಿಹತ್ಯೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಉಮಾದೇವಿ ಅವರು ಅಲ್ಲೇ ಇದ್ದರು. ಜತೆಗೆ ಅವರ ಮನೆ ಬಳಿಯೇ ಕಟ್ಟಡ ನಿರ್ಮಾಣ ಮೇಲ್ವಿಚಾರಣೆ ನಡೆಸುತ್ತಿದ್ದ ಪೀರ್ಬಾಷಾ ಅವರೂ ಇದ್ದರು. ಆದ್ದರಿಂದ ಇಬ್ಬರನ್ನೂ ಪ್ರತ್ಯಕ್ಷ ಸಾಕ್ಷಿ ಎಂದು ಪರಿಗಣಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿರುವ ಗಣೇಶ ಮಿಸ್ಕಿನ್ ಹಾಗೂ ಇತರ ಒಂಬತ್ತು ಮಂದಿಯನ್ನು ಎಸ್ಐಟಿ ಅಧಿಕಾರಿಗಳು ಸಾಕ್ಷಿಗಳಿಗೆ ತೋರಿಸಿದರು. ಮೂರು ಬಾರಿ ಬಟ್ಟೆ ಬದಲಿಸಿ ತೋರಿಸಿದಾಗಲೂ ಎಲ್ಲ ಸಲ ಗಣೇಶನೇ ಹತ್ಯೆಗೈದಿದ್ದು ಎಂದು ಸಾಕ್ಷಿಗಳು ಗುರುತಿಸಿದರು.ಕೆಲ ದಿನಗಳ ಹಿಂದೆ ಇದೇ ರೀತಿ ನಡೆದ ಪರೇಡ್ನಲ್ಲಿ ಬೈಕ್ ಓಡಿಸುತ್ತಿದ್ದಾತ ಪ್ರವೀಣ ಚತುರ ಎಂದು ಉಮಾದೇವಿ ಗುರುತಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಉಮಾದೇವಿ ಕಲಬುರ್ಗಿ, ‘ಗುಂಡಿಕ್ಕಿದ ಆರೋಪಿ ಯಾರು ಎಂಬುದನ್ನು ಪತ್ತೆ ಹಚ್ಚಿಅಧಿಕಾರಿಗಳಿಗೆ ತಿಳಿಸಿದ್ದೇವೆ. ಹತ್ಯೆಯಾದ ದಿನದಿಂದಲೇ ಆತನ ಚಹರೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.