ಮೈಸೂರು: ‘ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶಮೂರ್ತಿಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿರುವುದು ತೀವ್ರ ಖಂಡನೀಯ. ಇದಕ್ಕೆ ಕಾರಣವಾದವರನ್ನು ತ್ವರಿತವಾಗಿ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸೋಮವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಜನರ ಪ್ರಾಣ ರಕ್ಷಣೆ ಮಾಡುವುದು, ಒಳ್ಳೆಯ ಆಡಳಿತ ಕೊಡುವುದು ಹಾಗೂ ಎಲ್ಲ ಆಚರಣೆಗಳಿಗೂ ಗೌರವ ದೊರೆಯುವಂತೆ ಮಾಡುವ ಕೆಲಸವನ್ನು ಸರ್ಕಾರ ನಿರ್ವಹಿಸಬೇಕು. ಆದರೆ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ, ವಿಷಯವನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಆದರೆ, ರಾಜ್ಯದ ಜನರಿಗೆ ಸತ್ಯ ಗೊತ್ತಿದೆ. ಈ ಘಟನೆಯು ಸಂಘಟಿತ ಪ್ರಯತ್ನವಾಗಿದೆ. ಹಿಂದೂ ಧಾರ್ಮಿಕ ಆಚರಣೆ, ವೇದಿಕೆಗಳಿಗೆ ಧಕ್ಕೆ ತರುವುದಕ್ಕೆ ಹಾಗೂ ಹಲ್ಲೆ ಮಾಡುವ ಕೆಲಸ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಂಡು, ಶಾಂತಿಯುತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
‘ಬಾನು ಮುಷ್ತಾಕ್ ಅವರು ಕನ್ನಡಾಂಬೆಯ ಬಗ್ಗೆ ಮಾಡಿದ್ದ ಭಾಷಣಕ್ಕೆ ಸ್ಪಷ್ಟೀಕರಣ ಕೊಡಬೇಕು. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಬಂದು ದಸರಾ ಉದ್ಘಾಟಿಸಿದರೆ ನಮಗೇನೂ ಅಭ್ಯಂತರವಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.