ಬೆಂಗಳೂರು: ‘ಕರ್ನಾಟಕದ ಬೇರೆ–ಬೇರೆ ಜಿಲ್ಲೆಗಳಲ್ಲಿ ಆದಿ ಕರ್ನಾಟಕ (ಎ.ಕೆ), ಆದಿ ದ್ರಾವಿಡ (ಎ.ಡಿ) ಮತ್ತು ಆದಿ ಆಂಧ್ರ (ಎ.ಎ) ಸಮುದಾಯಗಳನ್ನು ಬೇರೆ–ಬೇರೆ ಜಾತಿ ಸಮುದಾಯಗಳ ಅಡಿಯಲ್ಲಿ ಗುರುತಿಸುತ್ತಿದ್ದು, ಆ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ.
ಎಂಆರ್ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಮಂದ ಕೃಷ್ಣ ಮಾದಿಗ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು.
‘12 ಜಿಲ್ಲೆಗಳಲ್ಲಿ ಈ ಮೂರೂ ಸಮುದಾಯಗಳನ್ನು ಬೇರೆ–ಬೇರೆ ಜಾತಿಗಳ ಅಡಿಯಲ್ಲಿ ಗುರುತಿಸುವ ತಪ್ಪಾಗಿದೆ. ಇದನ್ನು ಸರಿಪಡಿಸಬೇಕು. ಒಂದೇ ನಿರ್ದಿಷ್ಟ ಜಾತಿಯ ಉಪಜಾತಿಗಳು ಎಂದು ಇವುಗಳನ್ನು ಪರಿಗಣಿಸಬೇಕು’ ಎಂದು ಮಂದ ಕೃಷ್ಣ ಮಾದಿಗ ಕೋರಿದರು.
‘ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ನಿರ್ದಿಷ್ಟವಾದ ಅಂಕಿಅಂಶಗಳು ಇದ್ದವು. ಸರ್ಕಾರವು ಅದನ್ನೇ ಬಳಸಬಹುದಿತ್ತು. ಆದರೆ ಸಮೀಕ್ಷೆ ನಡೆಸಿ, ದತ್ತಾಂಶ ಸಂಗ್ರಹಿಸುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಆಯೋಗದ ಶಿಫಾರಸನ್ನು ಸರ್ಕಾರ ಒಪ್ಪಿದೆ. ಆದರೆ ಇದನ್ನು ಗಡುವಿನೊಳಗೇ ಮುಗಿಸಬೇಕು’ ಎಂದು ಒತ್ತಾಯಿಸಿದರು.
‘ಜಾತಿ ವರ್ಗೀಕರಣದ ಸಮಸ್ಯೆ ಮತ್ತು ದತ್ತಾಂಶ ಸಂಗ್ರಹದ ನಂತರವೇ ಒಳಮೀಸಲಾತಿಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.