ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ಬೆಂಗಳೂರು: ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರಿಗೆ ಸೇರಿದ ₹55 ಕೋಟಿ ಮೊತ್ತದ ಠೇವಣಿಗಳನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ತಮ್ಮ ಕಸ್ಟಡಿಯಲ್ಲಿ ಇರುವ ವೀರೇಂದ್ರ ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಮಂಗಳವಾರ ಹಲವೆಡೆ ಶೋಧ ನಡೆಸಲಾಗಿತ್ತು. ಈ ವೇಳೆ ವಿರೇಂದ್ರ ಅವರ ಹೆಸರಿನಲ್ಲಿರುವ 9 ಬ್ಯಾಂಕ್ ಖಾತೆಗಳು ಮತ್ತು 1 ಡಿಮ್ಯಾಟ್ ಖಾತೆಗಳ ದಾಖಲೆ ದೊರೆತಿತ್ತು. ಜತೆಗೆ 262 ಬೇನಾಮಿ ಖಾತೆಗಳ ಮಾಹಿತಿಯೂ ದೊರೆತಿತ್ತು ಎಂದು ಇ.ಡಿ ತಿಳಿಸಿದೆ.
ವೀರೇಂದ್ರ ಅವರ ಖಾತೆಗಳಲ್ಲಿ ಒಟ್ಟು ₹40.69 ಕೋಟಿ ಮತ್ತು ಬೇನಾಮಿ ಖಾತೆಗಳಲ್ಲಿ ₹14.46 ಕೋಟಿ ಠೇವಣಿ ಇತ್ತು. ಅವೆಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡು, ಖಾತೆಗಳನ್ನು ಸ್ಥಗಿತ
ಗೊಳಿಸಲಾಗಿದೆ ಎಂದು ಇ.ಡಿ ಮಾಹಿತಿ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಚೆಗೆ ದೇಶದ 31 ಕಡೆ ದಾಳಿ ನಡೆಸಿದ್ದ ಇ.ಡಿ ಅಧಿಕಾರಿಗಳು, ₹12 ಕೋಟಿ ನಗದು, ಚಿನ್ನಾಭರಣ ಮತ್ತು ಐದು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು. ವೀರೇಂದ್ರ ಅವರನ್ನು ಸಿಕ್ಕಿಂನಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದರು. ಅವರ ಕಸ್ಟಡಿ ಅವಧಿ ಗುರುವಾರ ಅಂತ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.