ರಾಮದುರ್ಗ (ಬೆಳಗಾವಿ): 'ಗಡಿ ವಿಚಾರದ ಕಾರಣ ಪರಿಸ್ಥಿತಿ ಸರಿ ಇಲ್ಲ. ಇಂಥ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ನೀಡಿದ್ದಾರೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ಈ ರೀತಿ ಪರಿಸ್ಥಿತಿಯಲ್ಲಿ ಬರಬಾರದು ಎಂಬ ಸಂದೇಶವನ್ನು ನಾವು ಈಗಾಗಲೇ ಕಳಿಸಿದ್ದೇವೆ. ಅದಾಗಿಯೂ ಬಂದರೆ; ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನ ಆದಾಗ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿದೆಯೋ ಅದೇ ಕ್ರಮ ಕೈಗೊಳ್ಳುತ್ತೇವೆ' ಎಂದರು.
'ಜತ್ತ ಕನ್ನಡಿಗರ ನೀರಾವರಿಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ₹2000 ಕೋಟಿ ಘೋಷಣೆ ಮಾಡಿದ್ದಾರೆಂದು ಕೇಳಿದ್ದೇನೆ. ಜತ್ತ ತಾಲ್ಲೂಕಿನ ಕನ್ನಡ ಕುಲಬಾಂಧವರು ಹಲವಾರು ವರ್ಷಗಳಿಂದ ನೀರು ಇಲ್ಲದೇ ಬಳಲುತ್ತಿದ್ದರು. ಅವರ ಕಷ್ಟ ಈಗಲಾದರೂ ನೀಗಲಿ' ಎಂದು ಪ್ರತಿಕ್ರಿಯಿಸಿದರು.
'ಈ ಯೋಜನೆ ಆ ಭಾಗದ ಜನರಿಗೆ ಮುಟ್ಟುವುದು ಮುಖ್ಯ' ಎಂದರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.