ಬೆಂಗಳೂರು: ಗಾಂಧಿ ಕುಟುಂಬಕ್ಕಾಗಿ ಚಪ್ಪಲಿ ಸವೆಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಹೊಸ ಜವಾಬ್ದಾರಿ ನೀಡಿದೆ ಎಂದು ವ್ಯಂಗ್ಯವಾಡಿರುವ ಬಿಜೆಪಿ ಅದಕ್ಕೆ ಪೂರಕವಾದ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಪೆಗಾಸಸ್ ಗೂಢಾಚರ್ಯೆ ವಿರುದ್ಧ ವಿರೋಧ ಪಕ್ಷಗಳ ನಾಯಕರ ಜೊತೆಗೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ದೃಶ್ಯ ಅದಾಗಿದೆ.
‘ ಪೆಗಾಸಸ್ ಎಂಬ ಅಸ್ತ್ರವನ್ನು ಬಿಜೆಪಿ ನನ್ನ ವಿರುದ್ಧ ಪ್ರಯೋಗಿಸಿದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಬಳಸಿದೆ,‘ ಎಂದು ರಾಹುಲ್ ಹೇಳುತ್ತಿರುವಾಗಲೇ ಹಿಂಬದಿ ನಿಂತಿರುವ ಮಲ್ಲಿಕಾರ್ಜುನ ಖರ್ಗೆ ಅವರು, ’ ಪ್ರೆಸ್ (ಮಾಧ್ಯಮ)‘ ಎಂದು ಹೇಳಿಕೊಡುತ್ತಾರೆ. ನಂತರ ರಾಹುಲ್ ಗಾಂಧಿ ‘ ಪ್ರೆಸ್ ವಿರುದ್ಧವೂ ಪೆಗಾಸಸ್ ಬಳಸಲಾಗಿದೆ,‘ ಎಂದು ಹೇಳುತ್ತಾರೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ, ’ಗಾಂಧಿ ಕುಟುಂಬಕ್ಕಾಗಿ ಚಪ್ಪಲಿ ಸವೆಸಿದ ಖರ್ಗೆ ಅವರಿಗೆ ಹೊಸ ಜವಾಬ್ದಾರಿ ಲಭಿಸಿದೆ. ರಾಹುಲ್ಗೆ ಖರ್ಗೆ ಪಾಠ ಹೇಳಿಕೊಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಗಾಂಧಿ ಕುಟುಂಬದ ಸೇವೆಯೇ ದೇಶ ಸೇವೆ,‘ ಎಂದು ಬಿಜೆಪಿ ಕುಹಕವಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.