ಕಲಬುರಗಿ: ‘ಖರ್ಗೆ ಲೂಟಿ ಅಂಗಡಿ ಬಂದ್ ಆಗಿದೆ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಟು ಟೀಕೆಗೆ ಉತ್ತರಿಸಿರುವ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ದೆಹಲಿಯಲ್ಲಿ ಕುಳಿತಿರುವ ಅವರ ಗುರುಗಳು (ನರೇಂದ್ರ ಮೋದಿ) ಕೇಳಿದರೆ ಸೂಕ್ತ ಉತ್ತರ ನೀಡುತ್ತೇನೆ’ ಎಂದು ತಿರುಗೇಟುನೀಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಟೀಲ್ ಹೇಳಿಕೆ ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಏನಾದರೂ ಪ್ರಶ್ನಿಸಿದರೆ ವ್ಯಂಗ್ಯ ಮಾಡುವುದನ್ನೇ ಕಲಿತಿದ್ದಾರೆ. ಅವರಿಗೆ ನಮ್ಮ ಪಕ್ಷದ ರಾಜ್ಯ ನಾಯಕರು ಸೂಕ್ತ ಉತ್ತರ ನೀಡುತ್ತಾರೆ’ ಎಂದರು.
ಚುನಾವಣೆ ಕಾರಣಕ್ಕೆ ಕೃಷಿ ಕಾಯ್ದೆ ವಾಪಸ್:‘ರೈತರ ಒತ್ತಡಕ್ಕೆ ಮಣಿದು ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿಲ್ಲ.ಚುನಾವಣೆ ಬಂದಿದೆ ಎಂದು ಹಿಂಪಡೆಯುತ್ತಿದ್ದಾರೆ. ಈಗ ಏಕಾಏಕಿ ಬಂದಿರುವ ರೈತರ ಬಗೆಗಿನ ಕಾಳಜಿ 700 ರೈತರು ತೀರಿಕೊಂಡಾಗ ಎಲ್ಲಿ ಹೋಗಿತ್ತು. ಈಗ ವಾಪಸ್ ಪಡೆಯುವ ಘೋಷಣೆ ಮಾಡಿದ್ದಾರೆ. ಇದು ಏಕವ್ಯಕ್ತಿ ಪ್ರದರ್ಶನ. ಅವರಿಗೆ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಗೌರವವೇ ಇಲ್ಲದಂತಾಗಿದೆ’ ಎಂದು ಟೀಕಿಸಿದರು.
15 ವಿಚಾರಗಳ ಕುರಿತು ಚರ್ಚೆ: ಚಳಿಗಾಲದ ಅಧಿವೇಶನದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡಿಸುವ ಕಾಯ್ದೆ ತರುವುದು, ಪೆಗಾಸಸ್ ಹಗರಣ ಸೇರಿ15 ವಿಷಯಗಳ ಕುರಿತು ಚರ್ಚಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ವಿಸ್ತೃತ ಚರ್ಚೆಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ 25ರಂದು ಸಭೆ ಕರೆದಿದ್ದಾರೆ
ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.