ADVERTISEMENT

‘ಕೊರೊನಾ ಇದೆ. ಧಮ್ಮಿದ್ರೆ ಮುಟ್ಟಿ...’

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 3:44 IST
Last Updated 27 ಮಾರ್ಚ್ 2020, 3:44 IST
ಲಾಕ್‌ಡೌನ್‌ ನಡುವೆಯೂ ಓಡಾಡುತ್ತಿದ್ದ ವಾಹನ ಸವಾರರೊಬ್ಬರು ತಡೆದು ತಪಾಸಣೆ ನಡೆಸುತ್ತಿರುವುದು
ಲಾಕ್‌ಡೌನ್‌ ನಡುವೆಯೂ ಓಡಾಡುತ್ತಿದ್ದ ವಾಹನ ಸವಾರರೊಬ್ಬರು ತಡೆದು ತಪಾಸಣೆ ನಡೆಸುತ್ತಿರುವುದು    

ಬೆಂಗಳೂರು: ‘ನನಗೆ ಕೊರೊನಾ ಇದೆ. ಮುಟ್ಟಿದ್ರೆ ನಿಮಗೂ ಬರುತ್ತೆ. ಧಮ್ಮಿದ್ರೆ ಮುಟ್ಟಿ’ ಎಂದು ಪೊಲೀಸರನ್ನೇ ಬೆದರಿಸಿ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂಜಿನಿಯರ್ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.

ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು, ಕೊರೊನಾ ವೈರಾಣು ಹರಡುವಿಕೆ ತಡೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಯಶವಂತಪುರದ 1ನೇ ಮುಖ್ಯರಸ್ತೆಯಲ್ಲಿ ನಿಂತಿದ್ದ ಯುವಕ, ‘ನನಗೂ ಕೊರೊನಾ ಇದೆ. ಧಮ್ಮಿದ್ರೆ ನನ್ನನ್ನು ಮುಟ್ಟಿ’ ಎಂದು ಕೂಗಾಡಿದ್ದ. ಪೊಲೀಸರು ಹತ್ತಿರ ಹೋದಾಗ, ‘ಹತ್ತಿರ ಬರಬೇಡಿ. ಮುಟ್ಟಬೇಡಿ. ನಿಮಗೂ ಕೊರೊನಾ ಬರುತ್ತೆ’ ಎಂದು ಹೆದರಿಸಿದ್ದ.

ADVERTISEMENT

ಯುವಕನನ್ನು ವಶಕ್ಕೆ ಪಡೆದ ಪೊಲೀಸರು, ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಆತ ಮಾದಕ ದ್ರವ್ಯ ಸೇವಿಸಿದ್ದ ಎಂಬ ಸಂಗತಿ ಗೊತ್ತಾಯಿತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ‘ಆತ ಮಾನಸಿಕವಾಗಿ ಅಸ್ವಸ್ಥನಂತೆ ವರ್ತಿಸಿದ್ದ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.