ಮಂಡ್ಯ: ಪ್ರೇಮ ಪ್ರಕರಣದಲ್ಲಿ ಬಾಲಕಿಯ ಕುಟುಂಬ ಸದಸ್ಯರಿಂದ ಹತ್ಯೆಗೀಡಾದ ನಗರದ ಕಲ್ಲಹಳ್ಳಿ ಬಡಾವಣೆ ಬಾಲಕ ದರ್ಶನ್ ಭಜರಂಗದಳ ನಗರ ವಿದ್ಯಾರ್ಥಿ ಘಟಕದ ಅಧ್ಯಕ್ಷನಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಭಜರಂಗದಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಯವಕ ಕಲ್ಲಹಳ್ಳಿಯಲ್ಲಿ ಕಚೇರಿ ತೆರೆಯಲು ಸಿದ್ಧತೆ ನಡೆಸಿದ್ದ. ಅಕ್ರಮವಾಗಿ ಹಸು ಸಾಗಿಸುವ ಪ್ರಕರಣ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ.
ಆತನ ಸಾವಿನ ಸುದ್ದಿ ತಿಳಿದ ನಂತರ ಭಜರಂಗದಳ ಕಾರ್ಯಕರ್ತರು ಆರೋಪಿ ಶಿವಲಿಂಗು ಮನೆ ಹಾಗೂ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ವೈಯಕ್ತಿಕ ವಿಚಾರವಾದ ಕಾರಣ ಹಿರಿಯ ಸಲಹೆ ಮೇರೆಗೆ ಪ್ರತಿಭಟನೆ ಕೈಬಿಟ್ಟರು ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಭದ್ರತೆ ನಡುವೆ ಅಂತ್ಯಕ್ರಿಯೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಸೇರಿ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಯ ನಡುವೆ ಶುಕ್ರವಾರ ಕಲ್ಲಹಳ್ಳಿ ಸ್ಮಶಾನದಲ್ಲಿ ದರ್ಶನ್ ಅಂತ್ಯಕ್ರಿಯೆ ನೆರವೇರಿತು. ಕಲ್ಲಹಳ್ಳಿಯ ವಿವಿಧೆಡೆ ದರ್ಶನ್ ಸಾವಿಗೆ ಶ್ರದ್ಧಾಂಜಲಿ ಕೋರಿ ಬೃಹತ್ ಕಟೌಟ್ ಹಾಕಲಾಗಿದೆ. ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಬಿಗಿ ಭದ್ರತೆ ಮುಂದುವರಿಸಲಾಗಿದೆ.
ಎಲ್ಲಾ ಆರೋಪಿಗಳ ಬಂಧನ: ಶನಿವಾರ ಮಧ್ಯಾಹ್ನದವರೆಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಲಿಂಗು ಸೇರಿ ಎಲ್ಲಾ 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮೈಸೂರು ಜಿಲ್ಲಾ ಅಪರಾಧ ನಿಗ್ರಹ ದಳ ಸಬ್ಇನ್ಸ್ಪೆಕ್ಟರ್ ಶಿವಮಂಜು ಅವರ ಇಬ್ಬರು ಮಕ್ಕಳೂ ಸೇರಿದ್ದಾರೆ.
ಪ್ರಮುಖ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು ಉಳಿದವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.