ಬೆಂಗಳೂರು: ‘ಸುಹಾಸ್ ಶೆಟ್ಟಿ ಹತ್ಯೆಗೂ ನಮಗೂ ಸಂಬಂಧವಿಲ್ಲ ಎಂದು ಫಾಝಿಲ್ ಅವರ ತಂದೆ ಮತ್ತು ಸೋದರ ನನಗೆ ಕರೆ ಮಾಡಿ ಹೇಳಿದ್ದಾರೆ. ತನಿಖೆಗೆ ಸಹಕರಿಸುವುದಾಗಿಯೂ ತಿಳಿಸಿದ್ದಾರೆ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫಾಝಿಲ್ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಬೇಕು ಎಂದು ತಾವು ಯಾವತ್ತಿಗೂ ಅಂದುಕೊಂಡಿಲ್ಲ. ಆ ವಿಷಯವನ್ನು ಅಲ್ಲಿಗೇ ಬಿಟ್ಟಿದ್ದೇವೆ. ಪೊಲೀಸರು ಕರೆದಲ್ಲಿಗೆ ಹೋಗಿ ಉತ್ತರಿಸುತ್ತೇವೆ ಎಂದು ನನ್ನ ಬಳಿ ಹೇಳಿದ್ದಾರೆ’ ಎಂದು ವಿವರಿಸಿದರು.
ಸುಹಾಸ್ ಹಂತಕರಿಗೆ ಬುರ್ಖಾಧಾರಿ ಮಹಿಳೆಯೊಬ್ಬರು ನೆರವು ನೀಡುತ್ತಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಸುದ್ದಿಗಾರರು ಪ್ರಸ್ತಾಪಿಸಿದ್ದಕ್ಕೆ ಖಾದರ್ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೊಗಳನ್ನು ಆಧರಿಸಿ ಚರ್ಚೆ ಮಾಡಲಾಗುತ್ತದೆಯೇ? ಇದನ್ನೆಲ್ಲಾ ಪ್ರಶ್ನಿಸುತ್ತಾರೆಯೇ’ ಎಂದು ಮರುಪ್ರಶ್ನಿಸಿದರು.
‘ಮಗನ ಸಾವು ನೋಡುವ ತಂದೆ–ತಾಯಿಯ ನೋವಿಗೆ ಅಂತ್ಯವಿಲ್ಲ. ನಾವು ಎಷ್ಟೇ ಸಂತಾಪ ಹೇಳಿದರೂ, ಅವರ ನೋವು ಕಡಿಮೆಯಾಗುವುದಿಲ್ಲ. ಎಷ್ಟೇ ಹಗೆ ಇದ್ದರೂ, ಕೊಲ್ಲುವ ಹಕ್ಕು ಅಥವಾ ಅಧಿಕಾರ ಯಾರಿಗೂ ಇಲ್ಲ. ತಪ್ಪಿತಸ್ಥರನ್ನು ಹುಡುಕಿ, ಅವರಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.