ಹೊಸಪೇಟೆ: ‘ಪ್ರಸಕ್ತ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವಿ ಪದವಿಗೆ ಆಯ್ಕೆ ಮಾಡಲಾಗಿದೆ’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ತಿಳಿಸಿದರು.
ಸೋಮವಾರ ವಿ.ವಿ.ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐ.ಎ.ಎಸ್. ಅಧಿಕಾರಿ, ಪರಿಷತ್ತಿನ ಅಧ್ಯಕ್ಷರಾಗಿ ಅವರು ನಿರ್ವಹಿಸಿದ ಕೆಲಸ ಹಾಗೂ ಅವರ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಅವರಿಗೆ ಈ ಗೌರವ ಪದವಿ ಪ್ರದಾನ ಮಾಡಲಾಗುತ್ತಿದೆ. ನಾಡೋಜಕ್ಕೆ ಮೂವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯಪಾಲರು ಮನು ಬಳಿಗಾರ ಅವರ ಒಬ್ಬರ ಹೆಸರು ಅಂತಿಮಗೊಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಜ. 30ರಂದು ಸಂಜೆ 5.30ಕ್ಕೆ ವಿ.ವಿ.ಯಲ್ಲಿ ನಡೆಯಲಿರುವ 27ನೇ ನುಡಿಹಬ್ಬದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಳಿಗಾರ ಅವರಿಗೆ ನಾಡೋಜ ಪ್ರದಾನ ಮಾಡುವರು. ವಿಜ್ಞಾನಿ ಎ.ಎಸ್. ಕಿರಣ ಕುಮಾರ ಘಟಿಕೋತ್ಸವ ಭಾಷಣ ಮಾಡುವರು’ ಎಂದು ತಿಳಿಸಿದರು.
‘ಕನ್ನಡ ಸಿನಿಮಾ ಚಾರಿತ್ರಿಕ ನೋಟ’ ಮತ್ತು ‘ಕರ್ನಾಟಕ ದಲಿತ ಚಳವಳಿ’ ಕುರಿತು ಕ್ರಮವಾಗಿ ಪ್ರಬಂಧ ಮಂಡಿಸಿರುವ ರಾಮದಾಸ್ ನಾಯ್ಡು ಹಾಗೂ ಆರ್. ಮೋಹನರಾಜ್ ಅವರಿಗೆಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಡಿ.ಲಿಟ್. ಪದವಿ ಪ್ರದಾನ ಮಾಡುವರು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.