ADVERTISEMENT

ಶ್ರೀ ಗುರುರಾಘವೇಂದ್ರ ಬ್ಯಾಂಕ್‌ ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 16:51 IST
Last Updated 6 ಜುಲೈ 2020, 16:51 IST
 ವಾಸುದೇವ ಮಯ್ಯ
ವಾಸುದೇವ ಮಯ್ಯ   

ಬೆಂಗಳೂರು: ಭಾರಿ ಹಣಕಾಸು ಅವ್ಯವಹಾರ ಆರೋ‍ಪಕ್ಕೆ ಒಳಗಾಗಿರುವ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಯ್ಯ, ಸಂಜೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆಗೆ ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸುಬ್ರಮಣ್ಯನಗರ ಪೊಲೀಸರು‍ಪರಿಶೀಲನೆ ನಡೆಸುತ್ತಿದ್ದಾರೆ.

ಠೇವಣಿದಾರರ ಹಣ ಹಿಂತಿರುಗಿಸದೆ ವಂಚಿಸಿದ ಆರೋಪ ಬ್ಯಾಂಕಿನ ಮೇಲಿದೆ. ₹ 1400 ಕೋಟಿಗೂ ಅಧಿಕ ಸಾಲ ವಸೂಲಾಗದ ಸಂಬಂಧ ಬ್ಯಾಂಕಿನ ಹಿಂದಿನ ಅಧ್ಯಕ್ಷ ರಾಮಕೃಷ್ಣ, ನಿರ್ದೇಶಕರು ಮತ್ತು ಸಿಇಒ ವಿರುದ್ಧ ವಂಚನೆ, ಫೋರ್ಜರಿ, ನಂಬಿಕೆ ದ್ರೋಹ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಆರಂಭದಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಜೂನ್‌ 18ರಂದು ವಾಸುದೇವಮಯ್ಯ, ಬ್ಯಾಂಕಿನ ಹಿಂದಿನ ಅಧ್ಯಕ್ಷ ರಾಮಕೃಷ್ಣ ಮನೆಗಳೂ ಸೇರಿದಂತೆ ಹಲವೆಡೆ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದೆ. ಕೋರ್ಟ್‌ ಆದೇಶದ ಮೇಲೆ ಈ ಪ್ರಕರಣವೂ ಸಿಐಡಿಗೆ ಹಸ್ತಾಂತರಗೊಂಡಿದೆ.

‘2012ರಿಂದ 2018ರ ನಡುವೆ ಮಯ್ಯ ಬ್ಯಾಂಕಿನ ಸಿಇಒ ಆಗಿದ್ದಾಗ ನಕಲಿ ಖಾತೆಗಳ ಮೂಲಕ ಸಾಲ ವಿತರಿಸಲಾಗಿದೆ. ಬಹುತೇಕ ಸಾಲಗಳಿಗೆ ಭದ್ರತೆ ಪಡೆದಿಲ್ಲ’ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕೆ ಇತ್ತೀಚೆಗೆ ಬ್ಯಾಂಕಿನ ಆಡಳಿತ ಮಂಡಳಿ ವಜಾ ಮಾಡಿ ಆಡಳಿತಾಧಿಕಾರಿ ನೇಮಿಸಲಾಗಿದೆ.

ಇದಲ್ಲದೆ, ಮಯ್ಯ ಅವರಿಗೆ ಸಂಬಂಧಿಸಿದಂತೆ ಬ್ಯಾಂಕಿನಲ್ಲಿ ₹ 8.08 ಕೋಟಿ ಸಾಲವಿದೆ. ಏಳು ಖಾತೆಗಳಲ್ಲಿ ಈ ಸಾಲ ಪಡೆಯಲಾಗಿದೆ ಎಂದು ಆರ್‌ಬಿಐಗೆ ಸಲ್ಲಿಸಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.