ADVERTISEMENT

ಸುಂಕ ಸಮರ: ಕೈಗಾರಿಕಾ ಸಚಿವರ ಸಭೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 0:18 IST
Last Updated 24 ಏಪ್ರಿಲ್ 2025, 0:18 IST
ಎಂ.ಬಿ ಪಾಟೀಲ
ಎಂ.ಬಿ ಪಾಟೀಲ   

ಬೆಂಗಳೂರು: ಅಮೆರಿಕ ಸಾರಿರುವ ಸುಂಕ ಸಮರ, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಡಂಬಡಿಕೆಗಳ ಸ್ಥಿತಿಗತಿ ಮತ್ತು ಇತ್ತೀಚಿನ ಜಾಗತಿಕ ರಾಜಕೀಯ ಬೆಳವಣಿಗೆಗಳ ಕುರಿತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಭಾರತ ಸೇರಿ ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಉತ್ಪನ್ನಗಳ ಮೇಲೆ ಭಾರಿ ಸುಂಕ ಏರಿಸಲು ತೀರ್ಮಾನಿಸಿದೆ. ಸದ್ಯಕ್ಕೆ ಅದು ಪ್ರತಿಸುಂಕ ವಿಧಿಸುವುದನ್ನು ಮೂರು ತಿಂಗಳ ಕಾಲ ಮುಂದೂಡಿದೆ. ಅಮೆರಿಕದ ಈ ಕ್ರಮ ಕರ್ನಾಟಕದ ಐಟಿ, ಬಿಟಿ, ಎಲೆಕ್ಟ್ರಾನಿಕ್ಸ್‌, ಫಾರ್ಮಾಸ್ಯೂಟಿಕಲ್‌, ರಕ್ಷಣಾ ಉತ್ಪನ್ನ ಮತ್ತಿತರ ರಫ್ತು ವಹಿವಾಟಿನ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎನ್ನುವುದನ್ನು ಸಭೆಯಲ್ಲಿ ಅಂದಾಜು ಮಾಡಲಾಯಿತು ಎಂದು ತಿಳಿಸಿದರು.

‘ಈ ಪರಿಸ್ಥಿತಿಯನ್ನು ರಾಜ್ಯವು ಸದವಕಾಶವಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. ಪ್ರತಿಸುಂಕದ ಹೊಡೆತಕ್ಕೆ ಹಲವು ದೇಶಗಳು, ಅನೇಕ ಉದ್ದಿಮೆಗಳು ನಲುಗಬಹುದು. ಅಂತಹ ಸಂದರ್ಭದಲ್ಲಿ ರಾಜ್ಯದ ಪಾತ್ರ ಹೇಗಿರಬೇಕು? ನಮ್ಮ ಹೂಡಿಕೆ ಒಪ್ಪಂದಗಳಿಗೆ ಯಾವ ತೊಂದರೆಯೂ ಆಗದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಹೇಳಿದರು.

ADVERTISEMENT

ಸುಂಕ ಸಮರವನ್ನು ಒಂದು ದೇಶವಾಗಿ ಹೇಗೆ ಎದುರಿಸಬೇಕೆಂದು ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಒಂದು ರಾಜ್ಯವಾಗಿ ಕರ್ನಾಟಕವು ಕೂಡ ಇದಕ್ಕೆ ಸಿದ್ಧವಾಗಬೇಕು. ಅದಕ್ಕಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ಪಾಟೀಲ ತಿಳಿಸಿದರು.

ಬೋಸ್ಟನ್‌ ಕನ್ಸಲ್ಟೆನ್ಸಿ ಗ್ರೂಪ್‌ನ ಅಂತರರಾಷ್ಟ್ರೀಯ ವ್ಯಾಪಾರ ತಜ್ಞ ಮೈಕೆಲ್‌ ಅವರು ಅಮೆರಿಕಾದಿಂದ ವರ್ಚುವಲ್ ರೂಪದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು. ಸುಂಕ ಸಮರದ ಪರಿಣಾಮಗಳನ್ನು ವಿಶ್ಲೇಷಣೆ ಮಾಡುವ ಕೆಲಸ ನಡೆಯುತ್ತಿದ್ದು, ಈ ಹಂತದಲ್ಲಿ ಹೀಗೆಯೇ ಆಗುತ್ತದೆ ಎಂದು ಹೇಳುವುದು ಕಷ್ಟ. ಸ್ವಲ್ಪದಿನ ಕಾದು ನೋಡಬೇಕಾಗಿದೆ. ಚೀನಾ ಮೇಲೆ ಹೆಚ್ಚು ತೆರಿಗೆ ಹಾಕಿದ್ದು, ಅದರ ಪರಿಣಾಮಗಳ ವಿಶ್ಲೇಷಣೆ ನಡೆದಿದೆ ಎಂದು ಮೈಕಲ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.