ADVERTISEMENT

ಪ್ರಧಾನಿಗೆ ಸ್ಟಾಲಿನ್‌ ಪತ್ರ: ಬೊಮ್ಮಾಯಿ ತಿರುಗೇಟು

ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಡಿಪಿಆರ್‌ ಪ್ರಸ್ತಾಪಿಸದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 19:38 IST
Last Updated 14 ಜೂನ್ 2022, 19:38 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕಾವೇರಿ ನದಿ ಮೇಲ್ವಿಚಾರಣಾ ಪ್ರಾಧಿಕಾರದ ಸಭೆಯಲ್ಲಿ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ವಿಷಯವನ್ನು ಪ್ರಸ್ತಾಪಿಸಲು ಅವಕಾಶ ನೀಡಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪ್ರಧಾನಿಯವರಿಗೆ ಪತ್ರ ಬರೆದಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಪ್ರಧಾನಿಯವರಿಗೆ ಪತ್ರ ಬರೆದಿರುವುದು ಅಪ್ಪಟ ರಾಜಕೀಯ ಸ್ಟಂಟ್‌’ ಎಂದು ವ್ಯಾಖ್ಯಾನಿಸಿದರು.

ಕಾವೇರಿ ನದಿ ಮೇಲ್ವಿಚಾರಣಾ ಪ್ರಾಧಿಕಾರ ಮೇಕೆದಾಟು ಯೋಜನೆಯ ಡಿಪಿಆರ್‌ ಅನುಮೋದನೆ ಮಾಡಬೇಕೆಂದು ಕೇಂದ್ರ ಜಲ ಆಯೋಗವೇ ಈ ಹಿಂದೆಯೇ ಷರತ್ತು ವಿಧಿಸಿತ್ತು. ಪ್ರಾಧಿಕಾರವು ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು, ಇದೇ 23ರಂದು ಅಂತಿಮ ಸಭೆ ನಡೆಸಲಿದೆ. ಕಾವೇರಿ ನದಿ ನೀರಿನ ವಿಷಯವಾಗಿ ತಮಿಳುನಾಡು ಹಲವು ವರ್ಷಗಳಿಂದ ತಕರಾರು ತೆಗೆಯುತ್ತಲೇ ಬಂದಿದೆ. ಈಗ ಬರೆದಿರುವ ಪತ್ರ ಅದರ ಭಾಗ. ಈ ಪತ್ರ ಕಾನೂನಿನ ಚೌಕಟ್ಟಿನಲ್ಲಿ ನಿಲ್ಲುವುದೂ ಇಲ್ಲ. ಕಾನೂನು ಬಾಹಿರ ಪತ್ರವನ್ನು ಕೇಂದ್ರ ಸರ್ಕಾರವೂ ಪರಿಗಣಿಸುವುದಿಲ್ಲ. ರಾಜ್ಯಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದೂ ಬೊಮ್ಮಾಯಿ ಹೇಳಿದರು.

ADVERTISEMENT

ಜೂನ್‌ 23ರಂದು ನಡೆಯುವ ಸಭೆಯಲ್ಲಿಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗವಹಿಸುತ್ತಾರೆ. ಸಭೆಯನ್ನು ಈ ಮೊದಲು ಇದೇ 16ಕ್ಕೆ ನಿಗದಿ ಮಾಡಲಾಗಿತ್ತು. ಅದನ್ನು 23ಕ್ಕೆ ಮುಂದೂಡಲಾಗಿದೆ.

ಕುಡಿಯುವ ನೀರಿಗೆ ಆಕ್ಷೇಪವೇಕೆ?:

‘ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಕಾವೇರಿ ನದಿ ನೀರಿನ ನಮ್ಮ ಪಾಲಿನ 4.75 ಟಿಎಂಟಿ ಅಡಿ ನೀರು ಬಳಕೆ ಮಾಡಿಕೊಳ್ಳಲು ಡಿಪಿಆರ್ ಮಾಡಿದ್ದೇವೆ. ಈ ನೀರನ್ನು ಬೆಂಗಳೂರಿನ ಜನರಿಗೆ ಕುಡಿಯುವ ಉದ್ದೇಶಕ್ಕೆ ಬಳಸಲಾಗುವುದು. ಅದಕ್ಕೆ ತಮಿಳುನಾಡು ಆಕ್ಷೇಪಿಸುವುದು ಸರಿಯಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

‘ನಾವು ತಮಿಳುನಾಡಿನ ನೀರು ಬಳಸಿಕೊಳ್ಳುತ್ತಿಲ್ಲ. ಅವರಿಗೆ ಕೊಡಬೇಕಾದ ನೀರನ್ನು ಕೊಡುತ್ತಿದ್ದೇವೆ. ಅವರಿಗೆ ಅಡ್ಡಿ ಮಾಡಿಲ್ಲ. ಆದರೆ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಅವರು ಅಡ್ಡಿ ಮಾಡುತ್ತಿರುವುದು ಸರಿಯಲ್ಲ. ಬೆಂಗಳೂರಿನಲ್ಲಿ 30 ರಾಜ್ಯಗಳ ಜನರು ಮತ್ತು ವಿದೇಶಿ ಪ್ರಜೆಗಳು ನೆಲೆಸಿದ್ದಾರೆ. ಸುಮಾರು 1.50 ಕೋಟಿ ಜನ ವಾಸವಿದ್ದಾರೆ. ಇವರಿಗೆ ನೀರು ಪೂರೈಕೆ ಮಾಡುವ ಯೋಜನೆಗೆ ಆಕ್ಷೇಪ ಸರಿಯಲ್ಲ’ ಎಂದೂ ತಿಳಿಸಿದರು.

ಸರ್ವಪಕ್ಷ ನಿಯೋಗ ಕರೆದೊಯ್ಯಲಿ: ಡಿಕೆಶಿ

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತ್ವರಿತವಾಗಿ ಅನುಮತಿ ಪಡೆಯಲು ಕೇಂದ್ರ ಸರ್ಕಾರವನ್ನು ಮನವೊಲಿಸಲು ರಾಜ್ಯ ಸರ್ಕಾರವು ಸರ್ವಪಕ್ಷಗಳ ಮುಖಂಡರ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದರು.

ತಮಿಳುನಾಡಿನ ಆಕ್ಷೇಪ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಮೇಕೆದಾಟು ಯೋಜನೆ ಅನುಷ್ಠಾನ ಮಾಡದಂತೆ ಸುಪ್ರೀಂ ಕೋರ್ಟ್‌ ಹೇಳಿಲ್ಲ. ಕೇಂದ್ರ ಸಚಿವರನ್ನು ಮನವೊಲಿಸಲು ನಿಮಗೆ ಸಾಧ್ಯವಾಗದಿದ್ದರೆ ನಾವು ಆ ಕೆಲಸವನ್ನು ಮಾಡುತ್ತೇವೆ. ಪ್ರಧಾನಿ ಬಳಿಗೆ ನಿಯೋಗ ಕರೆದೊಯ್ಯುವ ಕೆಲಸ ಮಾಡಿ’ ಎಂದರು.

‘ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿ’

ಬೆಂಗಳೂರು: ಮೇಕೆದಾಟು ಯೋಜನೆಯನ್ನು ವಿರೋಧಿಸಲು ತಮಿಳುನಾಡು ಸರ್ಕಾರಕ್ಕೆ ಅವಕಾಶಗಳೇ ಇಲ್ಲ. ಈಗ ರಾಜ್ಯ ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ಯೋಜನೆಗೆ ಅಗತ್ಯವಿರುವ ಅನುಮತಿಗಳನ್ನು ಪಡೆಯುವ ಕೆಲಸ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಇತ್ಯರ್ಥವಾಗಿದೆ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ಪತ್ರ ಬರೆಯುತ್ತಲೇ ಇರುತ್ತದೆ. ಅದನ್ನೇ ನೆಪ ಮಾಡಿಕೊಂಡು ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.