ADVERTISEMENT

ಮೇಕೆದಾಟು: ಸಣ್ಣಪ್ರಮಾಣದ ಅಣೆಕಟ್ಟೆಗಳ ನಿರ್ಮಾಣ ಸ್ವಾಗತಾರ್ಹ, ಸದ್ಗುರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 13:09 IST
Last Updated 3 ಆಗಸ್ಟ್ 2021, 13:09 IST
ಸದ್ಗುರು ಜಗ್ಗಿ ವಾಸುದೇವ್‌ ಅವರ ಸಾಂದರ್ಭಿಕ ಚಿತ್ರ
ಸದ್ಗುರು ಜಗ್ಗಿ ವಾಸುದೇವ್‌ ಅವರ ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ತಿಕ್ಕಾಟ ಜೋರಾಗಿದ್ದು, ಕೋಯಮತ್ತೂರು ಮೂಲದ ಈಶಾ ಫೌಂಡೇಶನ್‌ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರು ಸಣ್ಣಪ್ರಮಾಣದ ಅಣೆಕಟ್ಟೆಗಳ ನಿರ್ಮಾಣ ಸ್ವಾಗತಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿವಾದ ದುರಾದೃಷ್ಟಕರ ಎಂದಿರುವ ಸದ್ಗುರು, ಉಭಯ ರಾಜ್ಯಗಳು ಕುಳಿತು, ಪರಸ್ಪರ ಮಾತನಾಡಬೇಕು. ಯೋಜನೆಯು ಸಣ್ಣಪ್ರಮಾಣದಾಗಿದ್ದರೆ ಸ್ವಾಗತಾರ್ಹ, ಇದರಿಂದ ಸ್ಥಳೀಯರಿಗೆ ಮತ್ತು ಜೀವನಾಧಾರಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.

'ಡೆಕ್ಕನ್‌ ಹೆರಾಲ್ಡ್‌' ಜೊತೆ ಮಾತನಾಡಿದ ಸದ್ಗುರು, ವಿವಾದಕ್ಕಿಂತ ಹೆಚ್ಚಾಗಿ ನದಿಯ ಸಂರಕ್ಷಣೆಗೆ ಒತ್ತು ನೀಡಬೇಕಿದೆ. ಮುಂದಿನ ಪೀಳಿಗೆಗೆ ನದಿಯನ್ನು ಉಳಿಸಬೇಕಿದೆ ಎಂದರು.

ADVERTISEMENT

ವಿವಾದಿತ ವಿಚಾರಕ್ಕೆ ಸಂಬಂಧಿಸಿ ಮಾತನಾಡಲು ಹಿಂದೇಟು ಹಾಕಿದ ಸದ್ಗುರು, ತಾಯಿ ಕಾವೇರಿಯ ಸಂರಕ್ಷಣೆಗೆ ನನ್ನ ಪ್ರಮುಖ ಆದ್ಯತೆ. ರಾಜ್ಯ, ಭಾಷೆ ಎಂದು ಪ್ರತ್ಯೇಕವಾಗಿ ನೋಡದೆ ಎಲ್ಲರನ್ನು ಪೋಷಿಸುತ್ತಿದ್ದಾಳೆ. ವಿವಾದದ ಕುರಿತಾಗಿ ಚರ್ಚಿಸುತ್ತ ಸಮಯ ಹಾಳು ಮಾಡುವುದು ಬೇಡ. ನದಿ ಮತ್ತು ನೀರಿನ ಸಂರಕ್ಷಣೆ ವಿಚಾರವಾಗಿ ದೃಷ್ಟಿ ಹರಿಸೋಣ. ನೀರಿದ್ದರೆ ಎಲ್ಲವೂ ಎಂದರು.

ಕರ್ನಾಟದಲ್ಲಿ ನಿರ್ಮಾಣಕ್ಕೆ ಮುಂದಾಗಿರುವ ಮೇಕೆದಾಟು ಯೋಜನೆಯ ಗಾತ್ರ ಮತ್ತು ಪ್ರಮಾಣದ ಬಗ್ಗೆ ಅರಿವಿಲ್ಲ ಎಂದ ಜಗ್ಗಿ ಸದ್ಗುರು, ಸಣ್ಣಪ್ರಮಾಣದ ಅಣೆಕಟ್ಟೆಗಳಾದರೆ ಸ್ವಾಗತಾರ್ಹ ಎಂದರು.

ವಿಶ್ವದಲ್ಲಿ ಇಂದು ದೊಡ್ಡ ಅಣೆಕಟ್ಟೆಗಳ ನಿರ್ಮಾಣವನ್ನು ಬಿಟ್ಟುಬಿಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅಮೆರಿಕ ಒಂದರಲ್ಲೇ ಸುಮಾರು 900 ಅಣೆಕಟ್ಟೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹಿಂದೆ ಕೃಷಿ ಸವಾಲುಗಳನ್ನು ಎದುರಿಸುತ್ತಿದ್ದಾಗ ಅಣೆಕಟ್ಟೆಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಈಗ ಕೃಷಿಗೆ ಹಲವು ಮಾರ್ಗಗಳಿವೆ. ಅಣೆಕಟ್ಟೆಯ ನೀರು, ನಾಲೆ, ಪ್ರವಾಹ ನೀರಾವರಿ ಇವುಗಳಾವುವು ಭವಿಷ್ಯವಲ್ಲ. ಭವಿಷ್ಯವಿರುವುದು ಹನಿ ನೀರಾವರಿ ಮತ್ತು ಮಣ್ಣನ್ನು ಫಲವತ್ತತೆ ಮಾಡುವುದರಿಂದ. ಮಣ್ಣಿನಲ್ಲಿ ನೀರು ನಿಲ್ಲಬೇಕೆ ಹೊರತು ಅಣೆಕಟ್ಟೆಯಲ್ಲಿ ಅಲ್ಲ ಎಂದು ಸದ್ಗುರು ವಿವರಿಸಿದರು.

ರಾಜಕೀಯ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಸದ್ಗುರು, ಯಾಕೆಂದರೆ ಪರಸ್ಪರರ ಭಾವನೆಗಳನ್ನು ಈಗಾಗಲೇ ಕೆರಳಿಸಿಯಾಗಿದೆ. ನನಗೆ ಯೋಜನೆಯ ಆಳ-ಅಗಲ ಗೊತ್ತಿಲ್ಲ. ಆದರೆ ಸಣ್ಣ-ಪ್ರಮಾಣದ ಅಣೆಕಟ್ಟೆಯಾದರೆ, ಸ್ಥಳೀಯ ಕೃಷಿಕರಿಗೆ ಬದುಕಾದರೆ ಇದೇನು ವಿವಾದ ಮಾಡುವ ವಿಚಾರವಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.