ಮಂಡ್ಯ: ‘ಮುಸ್ಲಿಮರು ಹಿಂದೂ ದೇವರ ಮೂರ್ತಿಗಳನ್ನು ಕೆತ್ತನೆ ಮಾಡಬಾರದು. ಅನ್ಯ ಧರ್ಮೀಯರು ತಯಾರಿಸಿದ ದೇವರ ಮೂರ್ತಿಗಳನ್ನು ಹಿಂದೂ ದೇವಾಲಯಗಳಲ್ಲಿ ಪ್ರತಿಷ್ಠಪನೆ ಮಾಡಬಾರದು. ಈ ಕುರಿತು ರಾಜ್ಯದಾದ್ಯಂತ ಅಭಿಯಾನ ನಡೆಸಲಾಗುವುದು’ ಎಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕರಾದ ಶ್ರೀನಿವಾಸ ಗುರೂಜಿ ಗುರುವಾರ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿರುವ ಅವರು ‘ಹಿಂದೂ ದೇವರನ್ನು ಕೆತ್ತನೆ ಮಾಡಲು ಒಂದು ಪದ್ಧತಿ, ಸಂಪ್ರದಾಯವಿದೆ. ಅನ್ಯ ಧರ್ಮೀಯರು ಕೆತ್ತನೆ ಮಾಡಿದ ದೇವರಮೂರ್ತಿಯ ಪ್ರತಿಷ್ಠಾನೆಯನ್ನು ಶಾಸ್ತ್ರ ಒಪ್ಪುವುದಿಲ್ಲ. ಶಾಸ್ತ್ರ ಪ್ರಕಾರವಾಗಿ ವಿಶ್ವಕರ್ಮ ಸಮುದಾಯದ ಕುಶಲಕರ್ಮಿಗಳು ಮಾತ್ರ ದೇವರ ಮೂರ್ತಿ ತಯಾರಿಸುತ್ತಾರೆ. ಮುಸ್ಲಿಮರು ಹಿಂದೂ ದೇವರ ಮೂರ್ತಿ ಕೆತ್ತನೆ ಮಾಡುವುದೇ ಅಪರಾಧ’ ಎಂದರು.
‘ವಿಶ್ವಕರ್ಮ ಸಮುದಾಯದವರು ಶಾಸ್ತ್ರ ಅಧ್ಯಯನ ಮಾಡಿದ್ದು ಅದರ ಪ್ರಕಾರ ಮೂರ್ತಿ ಕೆತ್ತನೆ ಮಾಡುತ್ತಾರೆ. ಇನ್ನುಮುಂದೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಯಾವುದೇ ದೇವಾಲಯದಲ್ಲಿ ಮುಸ್ಲಿಮರು ತಯಾರಿಸಿದ ಮೂರ್ತಿಯನ್ನು ಪೂಜಿಸದಂತೆ ಜಾಗೃತಿ ಮೂಡಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.