ADVERTISEMENT

ಒಳನೋಟ: ಮಾನಸಿಕ ದುರ್ಬಲರಿಗೆ ಮಾಧ್ಯಮದ ಪ್ರಚೋದನೆ

ಪ್ರೀತಿ ಶ್ಯಾನಭಾಗ್
Published 20 ನವೆಂಬರ್ 2021, 20:12 IST
Last Updated 20 ನವೆಂಬರ್ 2021, 20:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಏಕವ್ಯಕ್ತಿಯ ಆತ್ಮಹತ್ಯೆಗೂ, ಇಡೀ ಕುಟುಂಬ ಅಥವಾ ಹೆಚ್ಚು ಜನರ ಆತ್ಮಹತ್ಯೆಗೂ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಶೇ 80–90ರಷ್ಟು ಮಾನಸಿಕ ತೊಂದರೆ, ಖಿನ್ನತೆ, ನಿಯಂತ್ರಣ ಸಾಧಿಸಲಾಗದ ಸಮಸ್ಯೆ ಕಾರಣಗಳಾಗಿರುತ್ತವೆ. ಬೆಳೆಯುತ್ತಿರುವ ಯುವಕರಲ್ಲಿ ಇಂತಹ ಲಕ್ಷಣಗಳು ಇರುತ್ತವೆ. ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಂತಹವರಲ್ಲಿ ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ಬಾಹ್ಯ ಪ್ರೇರಣಾ ಶಕ್ತಿಗಳು ಮನೋಬಲವನ್ನು ಕುಗ್ಗಿಸುತ್ತವೆ. ಒಂದೇ ಕುಟುಂಬದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳಲು ಇರುವ ಕಾರಣವೇ ಬೇರೆ.

ಕುಟುಂಬದಲ್ಲಿ ಜವಾಬ್ದಾರಿ ಹೊತ್ತವರು ಅಥವಾ ನಿರ್ಧಾರ ತೆಗೆದುಕೊಳ್ಳುವವರು ಕೆಲವೊಮ್ಮೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಮಹಿಳೆಯರು, ಮಕ್ಕಳು ಕೂಡ ಸಮಸ್ಯೆ ಅನುಭವಿಸಬೇಕಾಗುತ್ತದೆ. ಇದನ್ನು ಮಾನಸಿಕ ವಿಷಯದ ಪರಿಭಾಷೆಯಲ್ಲಿ ‘ಸ್ಕ್ಯೂಯಿಂಗ್’ ಎನ್ನುತ್ತೇವೆ. ನೆಟ್‌ಫ್ಲಿಕ್ಸ್‌ನಲ್ಲಿ ‘ಬುರಾರಿ ಸುಸೈಡ್ ಸ್ಕ್ವಾಡ್’ ಎಂಬ ವೆಬ್‌ ಸರಣಿ ಬಂದಿತ್ತು. ಅದರಲ್ಲಿ ಕಾಣುವ ಮಾನಸಿಕ ಒತ್ತಡವೇ ಕುಟುಂಬದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿರುತ್ತದೆ. ಹಿಂದೊಮ್ಮೆ ರೈತರ ಸಾಲು ಸಾಲು ಆತ್ಮಹತ್ಯೆ ಪ್ರಕರಣಗಳನ್ನು ಕಂಡಿದ್ದೆವು. ಕೋವಿಡ್‌ ನಂತರ ಅದು ಅಂತಹುದೇ ಪರಿಸ್ಥಿತಿಯನ್ನು ಅನೇಕ ಕುಟುಂಬಗಳಲ್ಲಿ ಸೃಷ್ಟಿಸಿತು. ‘ಮರಣವೇ ಸುಲಭದ ದಾರಿ’ ಎನ್ನುವ ಮನೆಯೊಡೆಯ ಅಥವಾ ಮನೆಯೊಡತಿಯ ತೀರ್ಮಾನವೇ ಇದರ ಮೂಲ. ಸಾಮಾಜಿಕ ಜಾಲತಾಣಗಳು ಅಥವಾ ಟಿ.ವಿ. ಕಾರ್ಯಕ್ರಮಗಳು ಇಂತಹ ಒತ್ತಡದಲ್ಲಿ ಇರುವವರ ಪಾಲಿಗೆ ಪ್ರೇರೇಪಣೆ ಆಗುವ ಸಾಧ್ಯತೆ ಇದ್ದೇ ಇದೆ. ಅವರದ್ದೇ ಸಮಸ್ಯೆ ಇರುವಾಗ ಸಾಲು ಸಾಲು ಸಮಸ್ಯೆಗಳನ್ನೇ ಬಿಂಬಿಸುವ ಕಾರ್ಯಕ್ರಮಗಳು, ಸುದ್ದಿ ಪ್ರಸಾರವು ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಕೋವಿಡ್‌ ಕಾಲದಲ್ಲಿ ಶೇ 30ರಷ್ಟು ಜನ ಸಾವಿನ ಆತಂಕದಿಂದ ಮೃತಪಟ್ಟರು. ಎಲ್ಲರೂ ಆಗ ಮನೆಯಲ್ಲೇ ಕುಳಿತಿದ್ದರಿಂದ ಸತತವಾಗಿ ಚಿಂತಾಕ್ರಾಂತವಾಗುವ ಸುದ್ದಿ ನೋಡುತ್ತಿದ್ದರು. ಮೊದಲೇ ಆರ್ಥಿಕವಾಗಿಯೋ ಸಾಮಾಜಿಕವಾಗಿಯೋ ಬಳಲುತ್ತಿರುವವರ ಮನಸ್ಸು ಇಂತಹ ಕಾರ್ಯಕ್ರಮಗಳನ್ನು ಸಹಜವಾಗಿ ಸ್ವೀಕರಿಸಲು ಸಾಧ್ಯವಿಲ್ಲ. ಹೀಗಾಗಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ವಾಹಿನಿಗಳು ಅಥವಾ ಸಾಮಾಜಿಕ ಜಾಲತಾಣಗಳು ಸಮಸ್ಯೆಗಳನ್ನು ತೋರಿಸುವುದರ ಜತೆಗೆ ಪರಿಹಾರವನ್ನೂ ಬಿತ್ತರಿಸಿದರೆ ಮನೋದೌರ್ಬಲ್ಯ ಇರುವವರೂ ಸುಧಾರಣೆ ಕಾಣಲು ಸಾಧ್ಯ. ಅದು ಆಗಬೇಕಿದೆ.

ADVERTISEMENT

(ಲೇಖಕಿ- ಮನೋವೈದ್ಯೆ, ಶಿವಮೊಗ್ಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.